ADVERTISEMENT

ಸಮಾಜಕ್ಕೆ ಸಂತರ ಮಾರ್ಗದರ್ಶನ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 6:00 IST
Last Updated 16 ಫೆಬ್ರುವರಿ 2012, 6:00 IST

ವಿಟ್ಲ: ಸಮಾಜಕ್ಕೆ ಸಂತರ ಮಾರ್ಗದರ್ಶನ ಅಗತ್ಯವಾಗಿದ್ದು, ಸ್ವಾಮೀಜಿಗಳು ಜನರಿಗೆ ಸಾರ್ಥಕ ಜೀವನ ಅಳವಡಿಸಲು ಮಾರ್ಗ ದರ್ಶನ ನೀಡಬೇಕೆಂದು ಧರ್ಮಸ್ಥಳ ಧರ್ಮಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮಾಣಿಲ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಬುಧವಾರ ನಡೆದ ಚತುಃಪವಿತ್ರ ನಾಗ ಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ದೀಪ ಪ್ರಜ್ವಲನ ಮಾಡಿ ಮಾತನಾಡಿದರು.

ಗೃಹಿಣಿಯೊಬ್ಬಳು ದಿನನಿತ್ಯ ವಿವಿಧ ಚಟುವಟಿಕೆ ಹಾಗೂ ಇನ್ನಿತರ ಕಾರ್ಯಗಳನ್ನು ಮಾಡುವ ರೀತಿಯಲ್ಲಿಯೇ ನಮ್ಮ ಸಂಸ್ಕಾರಗಳು ಕೂಡ ಅದೇ ರೀತಿ ಆಗಬೇಕಿದೆ ಎಂದರು.

ವ್ಯಕ್ತಿಯೊಬ್ಬ ಬದುಕಿನಲ್ಲಿ ದಾನ ದತ್ತಿಗಳನ್ನು ಮಾಡುತ್ತಿದ್ದಾಗ, ಅವನಿಗೆ ಸ್ವರ್ಗದ ಅನುಭವವಾಗುತ್ತದೆ. ಕೇಪು ವ್ಯಾಪ್ತಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ರೂ 2.29ಲಕ್ಷ ವ್ಯವಹಾರ ನಡೆದಿದ್ದು, ಇದರಲ್ಲಿ ಕೇವಲ 179 ರೂಪಾಯಿ ಬಾಕಿ ಉಳಿದದ್ದು ವಿಶೇಷ ಎಂದರು.

ಒಡಿಯೂರು ಗುರುದೇವಾನಂದ ಸ್ವಾಮೀಜಿ ಮಾತನಾಡಿ ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ ಬೇರೆ ಊರಿನಿಂದ ಬಂದು ಇಂತಹ ದೊಡ್ಡ ಸಾಧನೆ ಮಾಡಿದ್ದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದರು.

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಪ್ರಕೃತಿ ಆರಾಧನೆ ಮಾಡಬೇಕು. ಅದನ್ನು ಹಾಳು ಮಾಡಿದ್ದಾರೆ ನಮಗೆ ಒಳಿತಲ್ಲ ಎಂದರು.

ಮಾಣಿಲ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನ ಯೋಗಾನಂದ ಸರಸ್ವತೀ ಸ್ವಾಮೀಜಿ, ಸತ್ಯನಾರಾಯಣಪುರ ಮುಕ್ತಾನಂದ ಸ್ವಾಮೀಜಿ, ಸಂಸದ ನಳಿನ್‌ಕುಮಾರ್ ಕಟೀಲ್, ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಗಡೆ, ಸಚ್ಚಿದಾನಂದ ಶೆಟ್ಟಿ ಮುಂಬೈ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಂ.ಮೋಹನ ಆಳ್ವ, ಕುಲಾಲ ಸಂಘದ ಪಿ.ಕೆ ಸಾಲಿಯಾನ್ ಮುಂಬೈ, ವಿಟ್ಲ ಅರಮನೆಯ ಅರಸ ಜನಾರ್ದನ ವರ್ಮ, ಬಂಟ ಸಂಘದ ಅಜಿತ್ ಕುಮಾರ್ ರೈ ಮಾಲಾಡಿ, ಕುಂಬಾರರ ಮಹಾ ಸಂಘದ ಅಧ್ಯಕ್ಷ ಶಿವಕುಮಾರ್ ಚೌಡ ಶೆಟ್ಟಿ, ಉದ್ಯಮಿಗಳಾದ ಸೌಂದರ್ಯ ಮಂಜಪ್ಪ, ಮಹಾವೀರ ಅಜ್ರಿ, ಸೌಂದರ್ಯ ರಮೇಶ್, ಸತ್ಯಸಾಯಿ ಅಳಿಕೆಯ ಗಂಗಾಧರ್ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.