ಪುತ್ತೂರು: ಇಲ್ಲಿನ ಗಿಡಗೆಳೆತನ ಸಂಘ ‘ಸಮೃದ್ಧಿ’ಗೆ ಈಗ ರಜತದ ಸಂಭ್ರಮ. ಬೀಜ, ಗಿಡಗಳ ವಿನಿಮಯ, ಹೊಸ ಹಣ್ಣುಗಳ ಹುಡುಕಾಟ, ಅಲಂಕಾರಿಕ ಹೂವಿನ ಸಸ್ಯಗಳು, ತರಕಾರಿ, ಕೃಷಿ ಕ್ಷೇತ್ರಗಳ ಭೇಟಿ.. ಮೊದಲಾದ ಕಾರ್ಯಗಳ ಮೂಲಕ ಕಳೆದ 25 ವರುಷಗಳಿಂದ ಸಮೃದ್ಧಿಯು ಕೃಷಿ ಮತ್ತು ಕೃಷಿಕರ ಮನದ ಮಾತಿಗೆ ಕನ್ನಡಿಯಂತೆ ಕೆಲಸ ಮಾಡಿದೆ. ಇದೀಗ ರಜತ ಸಂಭ್ರಮದಲ್ಲಿದೆ.
ಸುಳ್ಯ ತಾಲ್ಲೂಕಿನ ಕೋಟೆಮುಂಡುಗಾರಿನ ಕಳಂಜ-ಬಾಳಿಲ ಪಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಇದೇ 29ರಂದು ಬೆಳಿಗ್ಗೆ ಗಂಟೆ 9ರಿಂದ ಸಂಜೆ 4ರ ತನಕ ಸಮೃದ್ಧಿಯ 25 ನೇ ವರುಷದ ಸಂಭ್ರಮವನ್ನು ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಭಾಸ್ಕರ ಆರ್.ಕೆ., ಕಾರ್ಯದರ್ಶಿ ರಾಮ್ಪ್ರತೀಕ್ ಕರಿಯಾಲ ಮತ್ತು ಕೋಶಾಧಿಕಾರಿ ಎ.ಪಿ. ಸದಾಶಿವ ತಿಳಿಸಿದರು.
1990 ಆರಂಭದಲ್ಲಿ ಅಡಿಕೆ ಬೆಲೆಯು ಜಿಗಿದಿತ್ತು. ಅಡಿಕೆ ತೋಟಗಳು ವಿಸ್ತಾರವಾದುವು. ಹಣ್ಣು, ಗಿಡಗಳ ಬಗೆಗಿನ ಅಸಕ್ತಿಗಳಿಗೆ ಸ್ವಲ್ಪ ಮಬ್ಬು ಕವಿಯಿತು. ಇದರ ನಡುವೆಯೂ ತರಕಾರಿ, ಹಣ್ಣು, ಹೂವಿನ ಗಿಡಗಳ ಬಗ್ಗೆ ಗುಂಗು ಹತ್ತಿಸಿಕೊಂಡ ಸಾಕಷ್ಟು ಕೃಷಿಕರಿದ್ದರು. ಇವರೆಲ್ಲರನ್ನೂ ‘ಸಮೃದ್ಧಿ’ ಹೆಸರಿನ ಕೂಟದ ಸೂರಿನಡಿ ತರುವ ಕೆಲಸವನ್ನು ಅಡಿಕೆ ಪತ್ರಿಕೆಯು ಮಾಡಿತ್ತು ಎಂದು ತಿಳಿಸಿದರು.
ಪ್ರತಿ ತಿಂಗಳು ಸಭೆ, ನಿಯಮಿತ ಕ್ಷೇತ್ರ ಭೇಟಿ ಮಾಡಲಾಗುತ್ತಿದೆ. ಸಿಹಿ ಹುಣಸೆ, ರುದ್ರಾಕ್ಷಿ, ಚಳ್ಳೇಹಣ್ಣು, ಕನಕಚಂಪಕ, ಅಗರ್, ಕರ್ಪೂರ ಗಿಡ, ಜಂಬುನೇರಳೆ, ಆಫ್ರಿಕನ್ ಚಿಕ್ಕು, ಎಗ್ಫ್ರುಟ್, ರೆಕ್ಕೆಬದನೆ, ಕಾಂಚಿಕೇಳ ಬಾಳೆ, ನೀರು ಹಲಸು, ಏಲಕ್ಕಿ ತುಳಸಿ. ಹೀಗೆ ಅಸಂಖ್ಯ ತಳಿಗಳು ಸಮೃದ್ಧಿಯ ಮೂಲಕ ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿ ವಿನಿಮಯದಿಂದ ವಿಶೇಷ ಜಾತಿಯ ಅಸಂಖ್ಯ ಗಿಡಗಳು ಹರಡಿ ಹೋಗಿವೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.