ADVERTISEMENT

ಸರ್ಕಾರ ಕಾರ್ಮಿಕರ ಪರವಾಗಿರಲಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 5:55 IST
Last Updated 21 ಏಪ್ರಿಲ್ 2012, 5:55 IST

ಮಂಗಳೂರು:`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತೀಚೆಗೆ ಕಾರ್ಮಿಕರನ್ನು ನಿರ್ಲಕ್ಷಿಸತೊಡಗಿವೆ. ಈ ಧೋರಣೆ ಬದಲಾಗಬೇಕು. ಸರ್ಕಾರ ಕಾರ್ಮಿಕರ ಹಿತ ಕಾಯಬೇಕು~ ಎಂದು ಸಿಐಟಿಯು ರಾಜ್ಯ ಸಮಿತಿಯ ಉಪಾಧ್ಯಕ್ಷ ಬಿ.ಮಾಧವ ಹೇಳಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿ ವಿರೋಧಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸಿಐಟಿಯು ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

`ರಾಜ್ಯದಲ್ಲಿ ಎಲ್ಲ ವರ್ಗದ ಕಾರ್ಮಿಕರಿಗೂ ಮಾಸಿಕ ಕನಿಷ್ಠ ರೂ 10ಸಾವಿರ ಕೂಲಿ ನಿಗದಿ ಪಡಿಸುವ ಸಲುವಾಗಿ ತಜ್ಞರ ಸಮಿತಿ ರಚಿಸಲಾಗಿದೆ. ಆದರೆ ಸರ್ಕಾರ ಈ ಸಮಿತಿಯ ಸಭೆಯನ್ನೇ ಕರೆದಿರಲಿಲ್ಲ. ಒತ್ತಡಕ್ಕೆ ಮಣಿದು ಸಭೆ ಕರೆಯಲಾಯಿತಾದರೂ ಯಾವುದೇ ಪ್ರಮುಖ ತೀರ್ಮಾನವನ್ನೂ ಕೈಗೊಂಡಿಲ್ಲ.~ ಎಂದು ಅವರು ಆರೋಪಿಸಿದರು.

`ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚನೆಯಾಗಿ ಎರಡು ವರ್ಷ ಕಳೆಯಿತು. ಇನ್ನೂ ಒಬ್ಬ ಕಾರ್ಮಿಕರಿಗೂ ಗುರುತಿನ ಚೀಟಿ ನೀಡಿಲ್ಲ. ಬದಲಾಗಿ ಕಾರ್ಮಿಕರ ದುಡಿಮೆಯ ಹಣವನ್ನು ಷೇರು ಪೇಟೆಗೆ ಒದಗಿಸಿ ಲಾಭ ಮಾಡುವ ಹುನ್ನಾರದೊಂದಿಗೆ ಎನ್.ಪಿ.ಎಸ್ ಲೈಫ್ ಹೆಸರಿನಲ್ಲಿ ಪಿಂಚಣಿ ಯೋಜನೆ ಆರಂಭಿಸಲಾಗಿದೆ. ಅಂಗನವಾಡಿ ನೌಕರರ ಮೇಲೆ ಈ ಯೋಜನೆ ಹೇರಲಾಗಿದ್ದು, ಇತರ ಕಾರ್ಮಿಕರನ್ನು ಇದರ ವ್ಯಾಪ್ತಿಯಲ್ಲಿ ತರುವ ಹುನ್ನಾರ ನಡೆಯುತ್ತಿದೆ~ ಎಂದರು.

`ಗುತ್ತಿಗೆ ಕಾರ್ಮಿಕರನ್ನು ಎಲ್ಲ ವಿಧದ ಕೆಲಸಕ್ಕೂ ಬಳಸುವ ಸರ್ಕಾರ ಅವರಿಗೆ ಕಾನೂನು ಪ್ರಕಾರ ನೀಡಬೇಕಾದ ಸವಲತ್ತುಗಳನ್ನು ನೀಡದೆ ಶೋಷಿಸುತ್ತಿದೆ. ಮೆಸ್ಕಾಂ, ಬಿಎಸ್‌ಎನ್‌ಎಲ್, ಅರೆಸರ್ಕಾರಿ ಹಾಗೂ ಖಾಸಗಿ ರಂಗದ ಕಾರ್ಮಿಕರು ಇದಕ್ಕೆ ಬಲಿಪಶು ಆಗಿದ್ದಾರೆ. ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನೇಮಕವಾಗಿರುವ ಅಂಗನವಾಡಿ, ಅಕ್ಷರದಾಸೋಹ ಹಾಗೂ ಆಶಾ ಕಾರ್ಯಕರ್ತೆಯರನ್ನೂ ಕಾಯಂಗೊಳಿಸಬೇಕು~ ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಆಗ್ರಹಿಸಿದರು.

`ಬೀದಿ ಬದಿ ವ್ಯಾಪಾರಿಗಳು, ಹಮಾಲಿ ಕಾರ್ಮಿಕರು, ಆಟೊರಿಕ್ಷಾ ಚಾಲಕರನ್ನೂ ರಾಷ್ಟ್ರೀಯ ಸ್ವಾಸ್ಥ್ಯ ವಿಮೆ ವ್ಯಾಪತಿಗೆ ತರಬೇಕು~ ಎಂದು ಅವರು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಬಿ.ಎಂ.ಭಟ್, ಉಪಾಧ್ಯಕ್ಷೆ ರಮಣಿ, ಯು.ಬಿ.ಲೋಕಯ್ಯ, ಪದ್ಮಾವತಿ ಶೆಟ್ಟಿ, ಸಂಜೀವ ಬಂಗೇರ, ಸದಾಶಿವ ದಾಸ, ಗಂಗಯ್ಯ ಅಮೀನ್, ರಾಧಾ, ರಾಮಣ್ಣ ವಿಟ್ಲ, ಬಾಬು ದೇವಾಡಿಗ, ಗಿರಿಜ ವಸಂತಿ, ವಿಲಾಸಿನಿ, ಜಯಂತ ನಾಯಕ್, ಜಯಂತಿ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್ ಇದ್ದರು.
 
ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಕಟ್ಟಡ ಕಾರ್ಮಿಕರು, ಮೆಸ್ಕಾಂ, ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರು, ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತೆ ಯರು, ಕಂಪ್ಯೂಟರ್ ಶಿಕ್ಷಕರು, ಬೀದಿ ಬದಿ ವ್ಯಾಪಾರಿಗಳು, ಆಟೊರಿಕ್ಷಾ ಚಾಲಕರು  ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.