ಮಂಗಳೂರು: ‘ಕೆರೆಯಲ್ಲಿ ನೀರು ಕೆಸರಾದರೆ ತಳ ಭಾಗ ಕಾಣಿಸುವುದಿಲ್ಲ. ಹಾಗೆಯೇ ನಮ್ಮ ಹೃದಯ ಕಲುಷಿತವಾದರೆ ದೇವರ ಇರುವಿಕೆ ನಮಗೆ ಕಾಣಿಸಲು ಸಾಧ್ಯವೇ ಇಲ್ಲ’ ಎಂದು ಉಪ್ಪಳ ಕೊಂಡೆಯೂರು ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಬಿಕರ್ನಕಟ್ಟೆ ನಾಯ್ಗರಲೇನ್ ಶ್ರೀ ಕ್ಷೇತ್ರ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಜ್ಞಾನದ ಬೆಳಕು ನಮ್ಮಲ್ಲಿ ಇದ್ದರೆ ಅಂಧಕಾರದಿಂದ ಬರುವ ಭಯ ದೂರವಾಗುತ್ತದೆ. ಕತ್ತಲಲ್ಲಿ ಒಂದು ತಂತಿಯನ್ನು ಮೆಟ್ಟಿದರೂ ನಾವು ಅದನ್ನು ಹಾವು ಎಂದುಕೊಂಡು ಹೆದರುತ್ತೇವೆ. ಆದರೆ ಬೆಳಕು ಹಾಯಿಸಿ ನೋಡಿದಾಗ ‘ಇಷ್ಟಕ್ಕೇ ನಾನು ಹೆದರಿದೆನೆ’ ಎಂದೆನಿಸುತ್ತದೆ. ಕತ್ತಲೆ ದೂರವಾದರೆ ಸತ್ಯದ ದರ್ಶನವಾಗುತ್ತದೆ ಎಂದು ಅವರು ಹೇಳಿದರು.
ದೇವರ ಮಹಿಮೆ ಏನು ಎಂದು ತಿಳಿಯಬೇಕಾದರೆ ನಮಗೆ ಜ್ಞಾನದ ಅರಿವು ಇರಬೇಕು. ಎಲ್ಲರಿಗೂ ಸಂತೋಷ ಕೊಡುವುದೇ ಭಗವಂತನ ಮೂಲ ಆಶಯ. ಭಗವಂತನ ಮೇಲೆ ಸ್ಥಿರವಾದ ನಂಬಿಕೆ ಇರಬೇಕು ಎಂದರು.
ಕತಾರ್ನ ಅಸೋಸಿಯೇಟ್ ಟೆಕ್ನಿಕಲ್ ಸರ್ವಿಸಸ್ನ ಆಡಳಿತ ನಿರ್ದೇಶಕ ಮೂಡಂಬೈಲು ರವಿ ಶೆಟ್ಟಿ, ಜಗದೀಶ್ ಮರೋಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಎ.ಬಂಗೇರ, ಗೌರವಾಧ್ಯಕ್ಷ ರವೀಂದ್ರ ಮಾರುತಿ ನಿಕಮ್, ಕಾರ್ಯಾಧ್ಯಕ್ಷ ಜಗದೀಶ್ ಕೆ.ಗರೋಡಿ, ಕ್ಷೇತ್ರದ ಮೊಕ್ತೇಸರ ವಿವೇಕಾನಂದ ನೀಗ್ಲೆ, ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಚಂದ್ರಶೇಖರ ಹೆಗಡೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.