ADVERTISEMENT

‘ಕೃಷಿ ಬೆಳೆಗಾರರಿಗಾಗಿ ವೇತನ ಆಯೋಗ ರಚಿಸಿ’

ಸರ್ಕಾರಕ್ಕೆ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 4:24 IST
Last Updated 21 ಡಿಸೆಂಬರ್ 2013, 4:24 IST

ಪುತ್ತೂರು: ಅಡಿಕೆ  ಲಕ್ಷಾಂತರ ಜನರ ಜೀವನಾ­ಧಾರವಾಗಿದ್ದು ಅದನ್ನು ಒಂದು ವೇಳೆ ನಿಷೇಧ ಮಾಡಿದಲ್ಲಿ ರೈತರ ಬದುಕು ಬೀದಿಪಾಲಾಗ­ಲಿದೆ. ಸರ್ಕಾರಿ ನೌಕರರಿಗೆ ವೇತನ ಆಯೋಗ­ವಿರುವಂತೆ ರೈತರಿಗೂ ವೇತನ ಆಯೋಗ ರಚನೆ ಮಾಡಬೇಕು ಎಂದು ರೈತ ಸಂಘದ ಮುಖಂಡ­ರಾದ ಶಾಸಕ  ಕೆ.ಎಸ್ ಪುಟ್ಟಣ್ಣಯ್ಯ ಆಗ್ರಹಿಸಿ­ದ್ದಾರೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಇಲ್ಲಿನ ಕಲ್ಲಾರೆಯಲ್ಲಿರುವ ಜಿಲ್ಲಾ ಘಟಕ ಕಚೇರಿಯಲ್ಲಿ ಶುಕ್ರವಾರ ನಡೆದ ಅಡಿಕೆ ಬೆಳೆಗಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ವಿವಿಧ ಕ್ಷೇತ್ರಗಳಿಗೆ ಅತ್ಯುನ್ನತ ಮಹತ್ವ ನೀಡುತ್ತಿರುವ ಸರ್ಕಾರ ನಮ್ಮ ದೇಶದಕೃಷಿ ಉತ್ಪನ್ನಗಳ ಬಗ್ಗೆಯಾಗಲಿ, ಕೃಷಿ ಉತ್ಪಾದನೆಯ ವಿಧಾನಗಳ ಬಗ್ಗೆಯಾಗಲೀ ಮಹತ್ವ ನೀಡದಿರು­ವುದು ಮತ್ತು ಸಣ್ಣ ಕೈಪಿಡಿಯನ್ನು ಕೂಡ ಹೊರಡಿಸುವುದು ದುರ­ದೃಷ್ಟಕರ ಎಂದರು.

ಕಾಸರಗೋಡು ಅಡಿಕೆ ಬೆಳೆಗಾರರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ರಾವ್ ಕಲ್ಲಗ ಮಾತನಾಡಿ, ಯಾರೋ ಕೆಲವರು ಎ.ಸಿ ರೂಂ­ನಲ್ಲಿ ಕುಳಿತು ಅಡಿಕೆಯ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿ ರೈತರನ್ನು ಕಂಗೆಡಿಸುವ ಬದಲು ವಾಸ್ತವ ಸತ್ಯವನ್ನು ಅರಿತುಕೊಂಡು ಹೇಳಿಕೆ ನೀಡಬೇಕು ಎಂದರು.

ಕಿಸಾನ್ ಸೇನೆಯ ಅಧ್ಯಕ್ಷ  ಗುಂಡ್ಯಡ್ಕ ವೆಂಕಟ್ರಮಣ ಭಟ್ ಮಾತನಾಡಿ, ಸರ್ಕಾರಿ  ಅಧಿಕಾರಿ­ಗಳು ಹಾಗೂ ಮಂತ್ರಿಗಳು ಜಡತ್ವ ಹಿಡಿದವರಾಗಿದ್ದು ಅವರಿಗೆ ರೈತರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ಅವರೆಲ್ಲರನ್ನು ಎಚ್ಚರಿಸುವ ಕೆಲಸ ನಮ್ಮಿಂದಾಗಬೇಕು ಎಂದರು.

ರೈತ ಸಂಘದ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ರವಿಕಿರಣ್ ಪುಣಚ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಸಂಘದ ಮಡಿಕೇರಿ ತಾಲ್ಲೂಕು ಸಂಚಾಲ ಶ್ರೀನಿವಾಸ ನಿಡಿಂಜ ಪ್ರಾಸ್ತಾವಿಕವಾಗಿ ಮಾತ­ನಾಡಿ­ದರು. ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಸುಳ್ಯ ತಾಲ್ಲೂಕು ಸಂಚಾಲಕ ಎಂ.ಡಿ ವಿಜಯ­ಕುಮಾರ್, ಕಿಸಾನ್ ಸೇನೆಯ ತಾಲ್ಲೂಕು ಕಾರ್ಯ­ದರ್ಶಿ ಗೋವಿಂದ ಭಟ್, ಹಾಸನ ಜಿಲ್ಲಾಧ್ಯಕ್ಷ ಕಣಗಲ್ ಮೂರ್ತಿ, ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ್ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.