ಮಂಗಳೂರು: ‘ಚುನಾವಣಾ ಕಚೇರಿ ಉದ್ಘಾಟನೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದು ಪಕ್ಷದ ಅಭ್ಯರ್ಥಿ ಗೆಲ್ಲುವ ಸೂಚನೆ. ನೀವು ಆಯಾ ಕ್ಷೇತ್ರದಲ್ಲಿ ಪ್ರಾಮಾಣಿಕ ವಾಗಿ ಕೆಲಸ ಮಾಡದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬಾರ ದಿರುವ ಅಪಾಯವೂ ಇದೆ’ ಎಂದು ಬಿಜೆಪಿಯ ದ.ಕ. ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರುಕ್ಮಯ ಪೂಜಾರಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ನಗರದ ಬಂಟ್ಸ್ ಹಾಸ್ಟೆಲ್ ಬಳಿ ಗುರು ವಾರ ಬಿಜೆಪಿಯ ನೂತನ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬಿಜೆಪಿಗೆ 272ಕ್ಕೂ ಅಧಿಕ ಸ್ಥಾನಗಳು ಬರಲಿವೆ ಎನ್ನಲಾಗುತ್ತಿದೆ. ಸಮೀಕ್ಷೆಗಳು ಏನೇ ಹೇಳಲಿ, ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಈ ಚುನಾವಣೆ ಯಲ್ಲೂ ಯುಪಿಎ ಆಡಳಿತಕ್ಕೆ ಬಂದರೆ, ದೇಶ ಹೋಳಾಗುತ್ತದೆ’ ಎಂದರು.
‘ಅನವಶ್ಯಕ ಅಪಪ್ರಚಾರಗಳಿಗೆ ಕಿವಿಕೊಡ ಬೇಡಿ. ನಳಿನ್ ಅವರು ಗೆದ್ದು ಮಂತ್ರಿ ಆಗಲಿದ್ದಾರೆ. ಈ ಕ್ಷೇತ್ರದಲ್ಲಿ ನಾಲ್ಕು ಸಲ ಸೋತ ವ್ಯಕ್ತಿಯ ಬಗ್ಗೆ ಗೌರವ ಇದೆ. ಆದರೆ, ಅವರು ಮೋದಿ ಬಗ್ಗೆ ಮಾತನಾಡುವಾಗ ಸುಮ್ಮನಿರುವುದಕ್ಕೆ ಸಾಧ್ಯವಾಗುವುದಿಲ್ಲ. ಶೇ 100ರಷ್ಟು ಶುದ್ಧಹಸ್ತರು ಯಾರೂ ಇಲ್ಲ. ಯಾರೂ ರಾಮ ದೇವರಂತಾಗಲು ಸಾಧ್ಯವಿಲ್ಲ’ ಎಂದರು
ಪಕ್ಷದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಶಾಸಕರಾದ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಪ್ರಮುಖರಾದ ಲಾಲಾಜಿ ಆರ್.ಮೆಂಡನ್, ಗಂಗಾಧರ ಗೌಡ, ಯೋಗೀಶ್ ಭಟ್, ಪ್ರಭಾಕರ ಬಂಗೇರ, ಪದ್ಮನಾಭ ಕೊಟ್ಟಾರಿ ಮುಂತಾದವರು ಹಾಜರಿದ್ದರು.
ಮಾಜಿ ಶಾಸಕ ಕೃಷ್ಣ ಪಾಲೆಮಾರ್ ಅವರು ನೂತನ ಕಚೇರಿಗೆ ಭೇಟಿ ನೀಡಿದರಾದರೂ ಸಭಾ ಕಾರ್ಯಕ್ರಮ ಆರಂಭವಾಗುವಾಗ ನಿರ್ಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.