ADVERTISEMENT

‘ಮೆಸ್ಕಾಂನಲ್ಲೇ ಆಕ್ಷೇಪಣೆ ಇತ್ಯರ್ಥಪಡಿಸಿಕೊಳ್ಳಿ’

ಮಣಿಪಾಲ ವಿವಿ ರಿಟ್‌ ಅರ್ಜಿ ತಳ್ಳಿಹಾಕಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 10:33 IST
Last Updated 4 ಜನವರಿ 2014, 10:33 IST

ಬೆಂಗಳೂರು: ನಗರದ ಅತ್ತಾವರದ ಕೆಎಂಸಿ ಆಸ್ಪತ್ರೆಗೆ ನೀಡಿದ್ದ ವಿದ್ಯುತ್‌ ಸಂಪರ್ಕವನ್ನು ಇತರ ಕಟ್ಟಡಗಳಿಗೆ ಅಕ್ರಮವಾಗಿ ವಿಸ್ತರಿಸಿದ ಪ್ರಕರಣ ಸಂಬಂಧ ಮಣಿಪಾಲ ವಿಶ್ವವಿದ್ಯಾಲಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ತಳ್ಳಿಹಾಕಿದ್ದು, ಮಣಿ­ಪಾಲ ವಿವಿಯಿಂದ ಆಕ್ಷೇಪಣೆಗಳನ್ನು ಪಡೆಯುವಂತೆ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯ (ಮೆಸ್ಕಾಂ) ಅಸೆಸ್‌ಮೆಂಟ್‌ (ದಂಡ) ಅಧಿಕಾರಿಗೆ ಸೂಚಿಸಿದೆ. 

ಆಕ್ಷೇಪಣೆ ಸಲ್ಲಿಕೆಯಾದ ನಂತರ, ವಿ.ವಿಯ ವಾದವನ್ನು ಆಲಿಸಿ, ಪ್ರಕರಣ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್‌ ಶುಕ್ರವಾರ ಸೂಚಿಸಿದೆ. ಮಣಿಪಾಲ ವಿ.ವಿಯ ಆಡಳಿತಕ್ಕೊಳಪಟ್ಟ ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಗೆ ಪಡೆದಿದ್ದ ವಿದ್ಯುತ್‌ ಸಂಪರ್ಕವನ್ನು ಅಕ್ರಮವಾಗಿ ಇತರ ಕಟ್ಟಡಕ್ಕೆ ವಿಸ್ತರಿಸಿತ್ತು. ಮಾಹಿತಿ ಹಕ್ಕು ಕಾರ್ಯಕರ್ತ ಹನೀಫ್‌ ಸಾಹೇಬ್‌ ಅವರು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಆಧಾರದಲ್ಲಿ ಈ ಬಗ್ಗೆ ಮೆಸ್ಕಾಂನ ವಿಚಕ್ಷಣಾ ದಳಕ್ಕೆ ದೂರು ನೀಡಿದ್ದರು.

ಮೆಸ್ಕಾಂ ವಿಚಕ್ಷಣಾ ದಳವು ಡಿ 9ರಂದು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಳಿ ನಡೆಸಿ, ದಂತವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಹಾಗೂ ಮಣಿಪಾಲ ಸ್ಕೂಲ್‌ ಆವರಣಕ್ಕೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕವನ್ನು ವಿಸ್ತರಿಸಿದ್ದನ್ನು ಪತ್ತೆ ಹಚ್ಚಿತ್ತು. ಈ ಸಂಬಂಧ ಮಣಿಪಾಲ ವಿವಿಗೆ ₨ 3.47 ಕೋಟಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ವಿ.ವಿ. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT