ಪುತ್ತೂರು: ಪುತ್ತೂರಿನ ಪಿಎಲ್ಡಿ ಬ್ಯಾಂಕಿನಲ್ಲಿ ಈ ಹಿಂದೆ ನಡೆದಿದ್ದ ಸುಸ್ತಿ ಸಾಲಗಾರರೊಬ್ಬರ ಜಮೀನು ಹರಾಜು ಪ್ರಕ್ರಿಯೆಗೆ ಅಡ್ಡಿಪಡಿಸಿದ ಪ್ರಕರಣದ 10 ಮಂದಿ ಆರೋಪಿಗಳ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿಗೊಳಿಸಿದೆ.
ಶ್ರಿಧರ ಶೆಟ್ಟಿ, ದೀಪಕ್ ರೈ, ಮಂಜುನಾಥ ರೈ, ಸುಧಾಕರ್ ರೈ, ಬಡಿಲ ಈಶ್ವರ ಭಟ್, ವೆಂಕಟ್ರಮಣ ಭಟ್, ರವಿಕುಮಾರ್ ನಾಯಕ್ , ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ , ಪ್ರಕಾಶ್ ರೈ ಮತ್ತು ಚೆನ್ನಪ್ಪ ಗೌಡ ಅವರ ಬಂಧನಕ್ಕೆ ನ್ಯಾಯಾಲಯ ವಾರಂಟ್ ಹೊರಡಿಸಿದೆ. ಆರೋಪಿಗಳು ರಾಜ್ಯ ರೈತ ಸಂಘ ಹಸಿರು ಸೇನೆಯ ಕಾರ್ಯಕರ್ತರಾಗಿದ್ದಾರೆ.
ಪಿಎಲ್ಡಿ ಬ್ಯಾಂಕಿನಿಂದ ಸಾಲ ಪಡೆದು ಸುಸ್ತಿ ಸಾಲಗಾರರಾಗಿದ್ದ ಪಾಣಾಜೆಯ ಶ್ರಿಮತಿ ಎಂಬವರು ಸಾಲದ ಮೊತ್ತವನ್ನು ಪಾವತಿಸದ ಕಾರಣಕ್ಕಾಗಿ ಕಳೆದ ವರ್ಷ ಜುಲೈ 7ರಂದು ಅವರ ಆಸ್ತಿಯ ಹರಾಜು ಪ್ರಕ್ರಿಯೆಗೆ ಬ್ಯಾಂಕ್ ಮುಂದಾಗಿತ್ತು . ಸಹಕಾರಿ ಕಾಯ್ದೆಯ ಪ್ರಕಾರ ಬ್ಯಾಂಕ್ ಆವರಣದಲ್ಲಿ ಹರಾಜು ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ ಆರೋಪಿಗಳು ಸೇರಿಕೊಂಡು ಹರಾಜು ಪ್ರಕ್ರಿಯೆಗೆ ಮತ್ತು ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಹಾಗೂ ತನ್ನನ್ನು ಪ್ರತಿಬಂಧನ ಮಾಡಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ನ ವ್ಯವಸ್ಥಾಪಕ ಧನಕೀರ್ತಿ ಶೆಟ್ಟಿ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ನ್ಯಾಯಾಲಯದ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸರು ಶ್ರಿಮತಿ ಅವರನ್ನು ಹೊರತುಪಡಿಸಿ ಉಳಿದ 10 ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಆರೋಪಿಗಳ ಬಂಧನಕ್ಕೆ ವಾರಂಟ್ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.