ಮಂಗಳೂರು: ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇದೇ 28ರಿಂದ 30ರವರೆಗೆ ರಾಷ್ಟ್ರಮಟ್ಟದ ಸಾವಯವ ಹಾಗೂ ಸಿರಿಧಾನ್ಯ ವಾಣಿಜ್ಯ ಮೇಳ ಆಯೋಜಿಸಲಾಗಿದೆ. ಅರಮನೆ ಮೈದಾನದಲ್ಲಿ ನಡೆಯುವ ಈ ಮೇಳ ದಲ್ಲಿ ರೈತರು, ದೇಶದ ವಿವಿಧೆಡೆಯ ಕೃಷಿ ವಿಜ್ಞಾನಿಗಳು, ಮಾರುಕಟ್ಟೆದಾರರು ಭಾಗವಹಿಸುವರು ಎಂದು ರಾಜ್ಯ ಮಟ್ಟ ದ ಸಾವಯವ ಕೃಷಿ ಉತ್ಪನ್ನ ಮಟ್ಟದ ಸಮಿತಿಯ ಅಧ್ಯಕ್ಷ ಸೋಮಶೇಖರ್ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ‘ಮೇಳದಲ್ಲಿ ವಿವಿಧ ಸಾವಯವ ಉತ್ಪನ್ನಗಳು, ಸಿರಿ ಧಾನ್ಯ ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳ ವಸ್ತು ಪ್ರದರ್ಶನ, ಉತ್ಪಾದಕರು ಮತ್ತು ಮಾರು ಕಟ್ಟೆದಾರರ ಮುಖಾಮುಖಿ ಭೇಟಿ, ಮಾರುಕಟ್ಟೆ, ಮೌಲ್ಯವರ್ಧನೆ ಹಾಗೂ ಸಂರಕ್ಷಣೆ ಬಗ್ಗೆ 28 ಮತ್ತು 29ರಂದು ಇಂಗ್ಲಿಷ್ ಭಾಷೆಯಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಇದೇ ವೇಳೆ ಕನ್ನಡ ಭಾಷೆಯಲ್ಲಿಯೂ ರೈತರ ಕಾರ್ಯಾಗಾರ ನಡೆಯಲಿದೆ’ ಎಂದರು.
‘ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಮತ್ತು ದಕ್ಷಿಣ ಕನ್ನಡ ಕೃಷಿ ಇಲಾಖೆಯ ಸಹಯೋಗದಲ್ಲಿ ರೈತರ ಕಾರ್ಯಾಗಾರಕ್ಕೆ 70 ಮಂದಿ ರೈತರು ನೋಂದಾಯಿಸಿದ್ದಾರೆ. ರಾಷ್ಟ್ರೀಯ ಸಮ್ಮೇಳನಕ್ಕೆ ಐವರು ರೈತರು ನೋಂದಣಿ ಮಾಡಿಕೊಂಡಿ ದ್ದಾರೆ. ಮೇಳದಲ್ಲಿ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಒಕ್ಕೂಟದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಸೌಲಭ್ಯ ಕಲ್ಪಿಸ ಲಾಗಿದೆ’ ಎಂದು ತಿಳಿಸಿದರು.
‘ಈ ಮೇಳಕ್ಕಾಗಿ ಆರು ತಿಂಗಳಿನಿಂದ ಪೂರ್ವಭಾವಿ ತಯಾರಿ ನಡೆಸಲಾಗಿದೆ. ರಾಜ್ಯದ 14 ಫೆಡರೇಷನ್ಗಳ ಸಹಕಾರ ದಲ್ಲಿ ಈ ಮೇಳವನ್ನು ಆಯೋಜಿಸ ಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನಷ್ಟು ಸಾವಯವ ಕೃಷಿಗೆ ರೈತರು ಒತ್ತು ನೀಡಬೇಕಾಗಿದೆ’ ಎಂದು ಹೇಳಿದರು.
ಸಮಗ್ರ ಕೃಷಿ: ಹೋಬಳಿ ಮಟ್ಟದ ಅಭಿಯಾನ ‘ಜಿಲ್ಲಾ ಕೃಷಿ ಇಲಾಖೆಯ ವತಿಯಿಂದ ಮೇ 8ರಿಂದ ಹೋಬಳಿವಾರು ಕೃಷಿ ಅಭಿಯಾನ ನಡೆಯಲಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಹೇಳಿದರು.
‘ಮೊದಲ ಎರಡು ದಿನ ಸಂವಾದ, ಮೂರನೆ ದಿನ ಅಭಿಯಾನ ಸಮಾರಂಭ ದ ಜತೆ ನೆಲ–ಜಲ ಸಂರಕ್ಷಣೆಯ ಕುರಿತು ಬೀದಿ ನಾಟಕ ನಡೆಸಲಾಗುವುದು ಎಂದು ಅವರು ಹೇಳಿದರು.
ಮಂಗಳೂರು ಎ ಹೋಬಳಿಯಲ್ಲಿ ಮೇ 17 ರಿಂದ 19, ಸುರತ್ಕಲ್ನಲ್ಲಿ ಮೇ 20ರಿಂದ 22, ಮೂಲ್ಕಿಯಲ್ಲಿ ಮೇ 23ರಿಂದ 25, ಮೂಡುಬಿದಿರೆಯಲ್ಲಿ ಮೇ 26ರಿಂದ 28, ಗುರುಪುರದಲ್ಲಿ ಮೇ 26ರಿಂದ 28ರವರೆಗೆ ಅಭಿಯಾನ ನಡೆಯಲಿದೆ.
ಬಂಟ್ವಾಳದಲ್ಲಿ ಮೇ 15ರಿಂದ 17, ಪಾಣೆಮಂಗಳೂರಿನಲ್ಲಿ 18ರಿಂದ 20, ವಿಟ್ಲದಲ್ಲಿ 21ರಿಂದ 23ರವರೆಗೆ, ಬೆಳ್ತಂಗಡಿಯಲ್ಲಿ ಮೇ 15ರಿಂದ 17, ವೇಣೂರಿನಲ್ಲಿ ಮೇ 18 ರಿಂದ 20, ಕೊಕ್ಕಡದಲ್ಲಿ ಮೇ 21ರಿಂದ 23ರವರೆಗೆ, ಪುತ್ತೂರಿನಲ್ಲಿ ಮೇ 8ರಿಂದ 10, ಉಪ್ಪಿನಂಗಡಿಯಲ್ಲಿ ಮೇ 11ರಿಂದ 13, ಕಡಬದಲ್ಲಿ ಮೇ 14ರಂದ 16ರವರೆಗೆ , ಸುಳ್ಯದಲ್ಲಿ ಮೇ 22ರಿಂದ 24, ಪಂಜದಲ್ಲಿ ಮೇ 25ರಿಂದ 27ರವರೆಗೆ ಕೃಷಿ ಅಭಿಯಾನ ನಡೆಸಲಾಗುವುದು’ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಾವಯವ ಕೃಷಿಕರ ಮಹಾ ಮಂಡಲದ ನಿರ್ದೇಶಕರಾದ ಪ್ರಭಾಕರ ಮಯ್ಯ, ಪ್ರಶಾಂತ್ ಗಟ್ಟಿ, ವಿಕ್ಟರ್ ರಾಡ್ರಿ ಗಸ್, ದೇವಿದಾಸ್ ರೈ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.