ADVERTISEMENT

800 ಲೋಡ್ ಮರಳು ವಶ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 6:14 IST
Last Updated 16 ಜನವರಿ 2018, 6:14 IST
800 ಲೋಡ್ ಮರಳು ವಶ
800 ಲೋಡ್ ಮರಳು ವಶ   

ಮಂಗಳೂರು: ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಪ್ರದೇಶಕ್ಕೆ ದಾಳಿ ಮಾಡಿದ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ, ಸುಮಾರು 800 ಲೋಡ್‌ಗಳಷ್ಟು ಮರಳನ್ನು ವಶಪಡಿಸಿಕೊಂಡಿದೆ.

ಮಂಗಳೂರು ತಾಲ್ಲೂಕಿನ ಮರವೂರು ವೆಂಟೆಡ್ ಡ್ಯಾಂ ಪಕ್ಕದ ಪಡುಶೆಡ್ಡೆ ಎಂಬಲ್ಲಿ ಗುರುಪುರ ನದಿ ತೀರದಲ್ಲಿ ಶನಿವಾರದಿಂದ ಈ ಕಾರ್ಯಾಚರಣೆ ಆರಂಭವಾಗಿದ್ದು, ಸೋಮವಾರದವರೆಗೂ ಸ್ಥಳದಲ್ಲಿ ಬೀಡುಬಿಟ್ಟಿರುವ ಕಂದಾಯ ಹಾಗೂ ಗಣಿ ಇಲಾಖೆ ಅಧಿಕಾರಿಗಳ ತಂಡ, ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಸುಮಾರು 800 ಲೋಡ್‌ಗಳಷ್ಟು ಮರಳನ್ನು ವಶಪಡಿಸಿಕೊಂಡಿದೆ.

ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ಈ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಈ ಸಂಬಂಧ ಒಟ್ಟು 6 ಮಂದಿಯ ಮೇಲೆ ಕಂದಾಯ ಹಾಗೂ ಗಣಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಸ್ಥಳದಲ್ಲಿದ್ದ ಸುಮಾರು 40 ಬೋಟ್‌ಗಳನ್ನು ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಮಿಕರ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್, ಕಾರ್ಮಿಕ ಇಲಾಖೆ, ಮೆಸ್ಕಾಂ ಹಾಗೂ ರೈಲ್ವೆ ಇಲಾಖೆಗಳು ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿವೆ.

ಮರಳು ಶಿರಾಡಿ ಕಾಮಗಾರಿಗೆ

ಪಡುಶೆಡ್ಡೆಯಲ್ಲಿ ವಶಪಡಿಸಿಕೊಂಡ ಎಲ್ಲ ಮರಳನ್ನು ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನೀಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಮೂಲಕ ಗಣಿ ಇಲಾಖೆಗೆ ರಾಜಧನ ಪಾವತಿಸಿ, ಶಿರಾಡಿಗೆ ಕಳುಹಿಸಲಾಗುತ್ತಿದೆ ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.