ಮಂಗಳೂರು: ಮಹಿಳೆಯರು ಶಕ್ತಿಯ ಸಂಗಮವಾಗಿದ್ದು, ಮಹಿಳೆಯರನ್ನು ಪೂಜಿಸುವ ಮೂಲಕ ಅವರಲ್ಲಿ ದೇವರನ್ನು ಕಾಣಬಹುದಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ನಗರದ ಬಂಟ್ಸ್ ಹಾಸ್ಟೆಲ್ನಲ್ಲಿ ಬಂಟರ ಯಾನೆ ನಾಡವರ ಸಂಘ, ಮಹಿಳಾ ವಿಭಾಗದ ವತಿಯಿಂದ ಶುಕ್ರವಾರ ನಡೆದ ಶಕ್ತಿ ಸಂಗಮ– 2018 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ಸ್ತ್ರೀ ಶಕ್ತಿ ಎದುರು ಪುರುಷ ಶಕ್ತಿ ಏನೂ ಇಲ್ಲ ಎಂದು ಹೇಳುತ್ತಾರೆ. ಆದರೆ ಸ್ತ್ರೀ ಶಕ್ತಿ ಬಲಿಷ್ಠವಾಗಬೇಕಾದರೆ ಅಲ್ಲಿ ಪುರುಷ ಶಕ್ತಿಯೂ ಅಗತ್ಯ. ಬಂಟರು ಎಲ್ಲಾ ಸಮಾಜದ ಜತೆ ಪ್ರೀತಿಯಿಂದ ಇರಲು ಬಯಸುತ್ತಾರೆ. ಸಮಾಜದಲ್ಲಿ ಇಂದು ಅಂತರ್ಜಾತೀಯ ವಿವಾಹ ಹಾಗೂ ವಿವಾಹ ವಿಚ್ಛೇದನ ಹೆಚ್ಚಾಗುತ್ತಿದೆ. ವಿದ್ಯಾರ್ಹತೆ ಹೊಂದಿದವರೇ ಇದನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಇದಕ್ಕೆ ಪೋಷಕರು ಬೆಂಬಲ ನೀಡುವುದು ಸರಿಯಲ್ಲ. ಇದರಿಂದ ಬಲಿಷ್ಠವಾಗಿರುವ ನಮ್ಮ ಸಮಾಜ ದುರ್ಬಲವಾಗುತ್ತದೆ’ ಎಂದರು.
ಉದ್ಘಾಟಿಸಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮಾತನಾಡಿ,‘ ಶಕ್ತಿಯ ಆರಾಧಕರಾದ ನಮ್ಮಲ್ಲಿ ಅರ್ಧನಾರೀಶ್ವರದ ಕಲ್ಪನೆ ಮೊದಲಿನಿಂದಲೂ ಇದೆ. ಶಿವನಿಲ್ಲದೆ ಶಕ್ತಿ ಇಲ್ಲ. ಶಕ್ತಿ ಇಲ್ಲದೆ ಶಿವನಿಲ್ಲ. ಈ ಶಕ್ತಿಯ ಸಮಾವೇಶಕ್ಕೆ ನಮ್ಮ ಸಹಕಾರ ಇದ್ದೇ ಇದೆ. ಬಂಟರ ಸಂಘದ ವತಿಯಿಂದ ಬಾಂಧವ್ಯ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷೆ ಲತಾ ಜಯರಾಮ್ ಶೆಟ್ಟಿ ಮಾತನಾಡಿ,‘ ಇಂದು ಮಹಿಳೆಯರು ಎಂಜಿನಿಯರಿಂಗ್, ರಾಜಕಾರಣ, ಸಿನಿಮಾ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದ್ದಾರೆ. ಆದರೆ ಕೆಲವು ವಿಷಯಗಳಲ್ಲಿ ಹಿಂದೆ ಇದ್ದಾರೆ ಎಂದು ಹೇಳಲು ಬೇಸರವಾಗುತ್ತದೆ. ಇದಕ್ಕೆ ಮೂಲ ಕಾರಣ ವಿದ್ಯೆ. ವಿದ್ಯೆಗೆ ವಂಚನೆ ಆಗದಂತೆ ಬಂಟರು ವಿದ್ಯೆಯಲ್ಲಿ ಹಿಂದುಳಿದವರನ್ನು ಮೇಲೆ ತರಬೇಕು’ ಎಂದರು.
ಶಕ್ತಿ ಸಂಗಮದ ಅಂಗವಾಗಿ ‘ಇಂದ್ರ ಧನುಷ್’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಆಹಾರ ಮಳಿಗೆ, ಕರಕುಶಲ ವಸ್ತುಗಳ ಮಾರಾಟ ಮಳಿಗೆ, ಗುಡಿ ಕೈಗಾರಿಕೆ ಮತ್ತು ಆಹಾರ ಉತ್ಪನ್ನ ಮಳಿಗೆಗಳು ಇದ್ದವು. ಮಹಿಳೆಯರಿಗೆ ರಕ್ತದಾನ, ಅಂಗಾಂಗ ದಾನ, ಸೋಲಾರ್ ಅಳವಡಿಕೆ, ತ್ಯಾಜ್ಯ ವಿಲೇವಾರಿಯ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷೆ ವತಿಕಾ ಪೈ, ಎಂಆರ್ಪಿಎಲ್ನ ಸೀನಿಯರ್ ಮ್ಯಾನೇಜರ್ ವೀಣಾ ಟಿ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಜತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ, ಸಂಚಾಲಕ ಜಯರಾಮ್ ಸಾಂತಾ, ಚಂದ್ರಿಕಾ ಶೆಟ್ಟಿ ಇದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.