ಮಂಗಳೂರು: ದುಬೈನಿಂದ ಮೊಬೈಲ್ ರೂಪದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದ ಕಾಸರಗೋಡು ನಗರದ ಯುವಕನೊಬ್ಬನನ್ನು ಮಂಗಳವಾರ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು, 1.2 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನ ಅಹಮ್ಮದ್ ನಬೀಲ್ ಗಫೂರ್ (21) ಬಂಧಿತ ಯುವಕ. ಈತ ಮಂಗಳವಾರ ಸಂಜೆ 6 ಗಂಟೆಗೆ ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಬಂದಿದ್ದ. ಖಚಿತ ಮಾಹಿತಿ ಆಧರಿಸಿ ಈತ ನನ್ನು ವಶಕ್ಕೆ ಪಡೆದು ತಪಾ ಸಣೆ ನಡೆಸಿ ದಾಗ ₹ 39 ಲಕ್ಷ ಮೌಲ್ಯದ 1 ಕೆ.ಜಿ. 282 ತೂಕದ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ.
‘ಖಚಿತ ಮಾಹಿತಿ ಆಧರಿಸಿ ವಿಮಾನದ ಬಾಗಿಲಿನಲ್ಲೇ ಯುವಕನನ್ನು ವಶಕ್ಕೆ ಪಡೆಯಲಾಯಿತು. ತಪಾಸಣೆ ನಡೆಸಿದಾಗ ಆತನ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ರೂಪದ ತೂಕದ ವಸ್ತು ಪತ್ತೆಯಾಯಿತು. ಪ್ರಶ್ನಿಸಿದಾಗ, ‘ಅದು ಮೊಬೈಲ್’ ಎಂದು ಆತ ವಾದಿಸಿದ. ಬಿಚ್ಚಿ ಪರಿಶೀಲಿಸಿದಾಗ ಚೌಕಾಕಾರದ 15 ಚಿನ್ನದ ಗಟ್ಟಿಗಳನ್ನು ಅಡಗಿಸಿಟ್ಟು, ಅದರ ಮೇಲೆ ಇನ್ಸುಲೇಷನ್ ಟೇಪ್ಗಳನ್ನು ಸುತ್ತಿರುವುದು ಪತ್ತೆಯಾಯಿತು’ ಎಂದು ಡಿಆರ್ಐ ಮಂಗಳೂರು ವಿಭಾಗದ ಉಪ ನಿರ್ದೇಶಕ ವಿನಾಯಕ್ ಭಟ್ ತಿಳಿಸಿದ್ದಾರೆ.
ಆರೋಪಿಯ ಬಳಿ 24 ಕ್ಯಾರೆಟ್ ಚಿನ್ನ ಇರುವುದು ತಪಾಸಣೆ ವೇಳೆ ಖಚಿತವಾಗಿದೆ. ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋ ಪದ ಮೇಲೆ ಆತನನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.