ADVERTISEMENT

ರೈ ಎಜುಕೇಶನಲ್ ಟ್ರಸ್ಟ್‌ ನಿಂದ ಬಡವರಿಗೆ ನಿವೇಶನ ’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 6:28 IST
Last Updated 5 ಫೆಬ್ರುವರಿ 2018, 6:28 IST

ಉಪ್ಪಿನಂಗಡಿ:‘ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್ ನಿಂದ ಮುಂದಿನ ದಿನಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಯೋಜನೆ ಇದೆ’ ಎಂದು ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.

ಪೆರ್ನೆಯ ಮೊಮ್ಮಾರಿಯ ಬಡ ಕುಟುಂಬವೊಂದಕ್ಕೆ ಟ್ರಸ್ಟ್‌ನ ಖರ್ಚಿನಲ್ಲಿ ಭೂ ಪರಿವರ್ತನೆ ಮಾಡಿ ಅದರ ದಾಖಲೆ ಪತ್ರ ಹಸ್ತಾಂತರಿಸಿದ ಬಳಿಕ ಮಾತನಾಡಿದ ಅವರು, ಟ್ರಸ್ಟ್ ವತಿಯಿಂದ ಐದು ಕಡೆಗಳಲ್ಲಿ ತಲಾ 5 ರಿಂದ 10 ಎಕರೆ ಜಾಗ ಖರೀದಿಸಿ, ಅದನ್ನು ನಾಲ್ಕು ಸೆಂಟ್ಸ್‌ನಂತೆ ನಿವೇಶನ ರಹಿತರಿಗೆ ಹಂಚಿ, ಅವರ ಹೆಸರಿನಲ್ಲಿ ಹಕ್ಕು ಪತ್ರ ಮಾಡಿಕೊಡಲಾಗುವುದು’ ಎಂದರು.

ಸರ್ಕಾರದ ವಸತಿ ಯೋಜನೆಯಡಿಯಲ್ಲಿ ನಿವೇಶನ ತೆಗಿಸಿಕೊಟ್ಟು, ಅದಕ್ಕೆ ಟ್ರಸ್ಟ್‌ನ ಹಣವನ್ನು ಸೇರಿಸಿ, ಅವರಿಗೆ ಉತ್ತಮವಾದ ಮನೆ ನಿರ್ಮಿಸಿಕೊಡಲಾಗುವುದು. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 1 ಸಾವಿರ ಬಡ ನಿವೇಶನ ರಹಿತರಿಗೆ ಈ ಸೌಲಭ್ಯ ನೀಡಲು ಯೋಜನೆ ಹಾಕಿಕೊಳ್ಳಲಾಗಿದ್ದು, ಇಂತಹ ಲೇಔಟ್‍ಗಳಿಗೆ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯ, ರಸ್ತೆ, ಶಾಲಾ ವ್ಯವಸ್ಥೆಯನ್ನು ಟ್ರಸ್ಟ್ ವತಿಯಿಂದಲೇ ಮಾಡಿಕೊಡಲಾಗುವುದು ಎಂದರು.

ADVERTISEMENT

ಪೆರ್ನೆ-ಬಿಳಿಯೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ಗೌಡ, ಸ್ಥಳದಾನಿ ಗೋಪಾಲ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಮಾತನಾಡಿದರು. ಮಲ್ಲಡ್ಕ ಶಾಲೆಗೆ ಶಿಕ್ಷಕರ ಗೌರವಧನದ ಚೆಕ್ ಹಸ್ತಾಂತರಿಸಲಾಯಿತು.

ಪೆರ್ನೆ ಗ್ರಾಮ ಪಂಚಾಯಿತಿ ಸದಸ್ಯರಾದ ಯಶೋಧಾ, ಲಲಿತಾ, ಸುಮತಿ, ಹರಿಣಾಕ್ಷಿ, ಶಿವಪ್ಪ ನಾಯ್ಕ, ವೇಣುಗೋಪಾಲ ಶೆಟ್ಟಿ, ಬಿಜೆಪಿ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಶರೂನ್ ನೊರೋನ್ಹಾ, ಬಿಜೆಪಿ ಮುಖಂಡರಾದ ಪುಷ್ಪರಾಜ ಶೆಟ್ಟಿ, ಸುರೇಂದ್ರ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.