ADVERTISEMENT

ಯುವಕರ ಗುಂಪುಗಳ ನಡುವೆ ಮಾರಾಮಾರಿ: ಒಬ್ಬನ ಕೊಲೆ, ಇಬ್ಬರು ಗಂಭೀರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 9:38 IST
Last Updated 1 ಜೂನ್ 2020, 9:38 IST

ಮಂಗಳೂರು: ನಗರದ ಬಜ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ಕಟೀಲು ಸಮೀಪದ ಎಕ್ಕಾರು ಅರಸುಗುಡ್ಡೆಯಲ್ಲಿ ಭಾನುವಾರ ರಾತ್ರಿ ಯುವಕರ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಒಬ್ಬನ ಕೊಲೆಯಾಗಿದೆ. ಇಬ್ಬರು ಯುವಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮರಕಡ ನಿವಾಸಿ ಕೀರ್ತನ್‌ (20) ಕೊಲೆಯಾದ ಯುವಕ. ಆತನ ಸಹಚರರಾದ ನಿತಿನ್‌ (20) ಮತ್ತು ಮಹೇಶ್‌ (20) ಗಾಯಗೊಂಡಿರುವವರು.

ಕೀರ್ತನ್‌ ಗುಂಪಿನ ಯುವಕರು ಮತ್ತು ಎದುರಾಳಿಯ ಮತ್ತೊಂದು ಗುಂಪಿನ ಯುವಕರ ನಡುವೆ ಕೆಲವು ದಿನಗಳಿಂದ ವೈಷಮ್ಯ ಇತ್ತು. ಭಾನುವಾರ ರಾತ್ರಿ ಕೀರ್ತನ್‌, ನಿತಿನ್‌ ಮತ್ತು ಮಹೇಶ್‌ ಅರಸುಗುಡ್ಡೆಯಲ್ಲಿ ಒಟ್ಟಾಗಿದ್ದರು. ಅಲ್ಲಿಂದ ಎದುರಾಳಿಗಳಿಗೆ ದೂರವಾಣಿ ಕರೆಮಾಡಿದ್ದ ಕೀರ್ತನ್‌, ಅಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ADVERTISEMENT

ಎರಡು ಗುಂಪುಗಳು ಒಟ್ಟಾದಾಗ ಮಾತಿನ ಚಕಮಕಿ ನಡೆದಿದೆ. ಬಳಿಕ ಅವರ ನಡುವೆ ಘರ್ಷಣೆ ಉಂಟಾಗಿದೆ. ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಎದುರಾಳಿ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರಿಂದ ಕೀರ್ತನ್‌ ಮೃತಪಟ್ಟಿದ್ದಾನೆ. ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮರಳು ಗಣಿಗಾರಿಕೆ ವಿಷಯದಲ್ಲಿ ಎರಡೂ ಗುಂಪುಗಳ ನಡುವೆ ದ್ವೇಷ ಇತ್ತು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.