ADVERTISEMENT

ಕಡಬ, ಬೆಳ್ತಂಗಡಿ ತಾಲ್ಲೂಕಿನಲ್ಲಿ ಕಂಡಿದ್ದು ಮರುಭೂಮಿ ಮಿಡತೆ ಅಲ್ಲ: ಕೃಷಿ ಇಲಾಖೆ

ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿರುವ ಕೃಷಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 31 ಮೇ 2020, 14:00 IST
Last Updated 31 ಮೇ 2020, 14:00 IST
ಕಡಬ ಸಮೀಪ ನೂಜಿಬಾಳ್ತಿಲ ಎಂಬಲ್ಲಿ ತೋಟದಲ್ಲಿ ಕಾಣಿಸಿಕೊಂಡ ಮಿಡತೆ ಹಿಂಡು
ಕಡಬ ಸಮೀಪ ನೂಜಿಬಾಳ್ತಿಲ ಎಂಬಲ್ಲಿ ತೋಟದಲ್ಲಿ ಕಾಣಿಸಿಕೊಂಡ ಮಿಡತೆ ಹಿಂಡು   

ಮಂಗಳೂರು: ಜಿಲ್ಲೆಯ ಕಡಬ ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿಯ ರೆಂಜಿಲಾಡಿ ಹಾಗೂ ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಪರಿಸರದಲ್ಲಿ ಶನಿವಾರ ಸಂಜೆ ಕಂಡು ಬಂದಿರುವ ಮಿಡತೆಯ ಹಿಂಡು ಮರಭೂಮಿ ಲೋಕಸ್ಟ್‌ ಅಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಕಂಡು ಬಂದಿರುವ ಮಿಡತೆಯ ಪ್ರೌಢಾವಸ್ಥೆ ಹಂತದ ಮಾದರಿಯನ್ನು ಪರಿಶೀಲನೆಗಾಗಿ ಕೀಟ ಶಾಸ್ತ್ರಜ್ಞರಿಗೆ ಕಳುಹಿಸಲಾಗಿದೆ. ಮಿಡತೆ ಹಾವಳಿ ಕುರಿತು ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಅದಾಗ್ಯೂ ಈಗ ಕಂಡು ಬಂದಿರುವ ಮಿಡತೆಗಳು ಬೆಳೆಗೆ ಹಾನಿ ಮಾಡಿದಲ್ಲಿ, ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಡ್ರಂ ಅಥವಾ ಪಾತ್ರೆ ಅಥವಾ ಫಲಕಗಳನ್ನು ಬಡಿಯುವ ಮೂಲಕ ಹೆಚ್ಚಿನ ಶಬ್ದವನ್ನು ಉಂಟು ಮಾಡುವುದು, ಬೇವಿನ ಮೂಲದ ಕೀಟನಾಶಕಗಳನ್ನು ಬೆಳೆಗಳಲ್ಲಿ ಸಿಂಪಡಿಸುವ ಮೂಲಕ ಕೀಟದಿಂದ ಬೆಳೆ ಹಾನಿ ಕಡಿಮೆ ಮಾಡಬಹುದು. ಕೀಟಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕಬಹುದು. ಕೀಟವು ಮರಿಹುಳುಗಳಾಗಿದ್ದಲ್ಲಿ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ತೋಡಿ, ಮರಿ ಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬಹುದು. ಮಿಡತೆ ಹಗಲಿನಲ್ಲಿ ಸಂಚರಿಸಿ, ರಾತ್ರಿ ವೇಳೆ ಮರಗಿಡಗಳ ಮೇಲೆ ಆಶ್ರಯ ಪಡೆಯುವುದರಿಂದ ಟ್ರ್ಯಾಕ್ಟರ್ ಮೌಂಟೆಡ್‌ ಜೆಟ್ ಸ್ಪ್ರೇಯರ್‌ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು. ಆದರೆ, ಈ ಕೀಟನಾಶಕಗಳನ್ನು ಜಲಮೂಲಗಳ ಸಮೀಪ ಸಿಂಪಡಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.

ADVERTISEMENT

ಕ್ಲೋರೋಪೈರಿಪಾಸ್‌ ಶೇ 20 ಎಸಿ ಕೀಟನಾಶಕವನ್ನು ಪ್ರತಿ ಹೆಕ್ಟೇರ್‌ಗೆ 1.2 ಲೀಟರ್‌ ಸಿಂಪಡನೆ ಮಾಡಬಹುದು. ಕ್ಲೋರೋಪೈರಿಪಾಸ್ ಶೇ 50 ಎಸಿ ದ್ರಾವಣವನ್ನು 480 ಮಿ.ಲೀ., ಡೆಲ್ಟಮೆಥ್ರಿನ್‌ ಶೇ 2.8 ಇಸಿ ದ್ರಾವಣವನ್ನು 450 ಮಿ.ಲೀ., ಫಿಪ್ರೋನಿಲ್‌ ಶೇ 5 ಎಸ್‌ಸಿ ದ್ರಾವಣವನ್ನು 125 ಮಿ.ಲೀ., ಫಿಪ್ರೋನಿಲ್‌ ಶೇ 2.8 ಇಸಿ ದ್ರಾವಣವನ್ನು 225 ಮಿ.ಲೀ., ಲ್ಯಾಮ್ಡಾಸಹಲೋಥ್ರಿನ್‌ ಶೇ 5 ಇಸಿ ದ್ರಾವಣವನ್ನು 400 ಮಿ.ಲೀ., ಲ್ಯಾಮ್ಡಾಸಹಲೋಥ್ರಿನ್‌ ಶೇ 10 ಡಬ್ಲ್ಯುಪಿ ರಾಸಾಯನಿಕವನ್ನು 200 ಗ್ರಾಂ, ಮೆಲಾಥಿಯಾನ್‌ ಶೇ 50 ಎಸಿ ದ್ರಾವಣವನ್ನು 1.85 ಲೀಟರ್‌, ಮೆಲಾಥಿಯಾನ್‌ ಶೇ 25 ಡಬ್ಲ್ಯುಪಿ ರಾಸಾಯನಿಕವನ್ನು 3.7 ಕೆ.ಜಿ. ಬಳಕೆ ಮಾಡಬಹುದು ಎಂದು ಹೇಳಿದ್ದಾರೆ.

***

ಸ್ಥಳೀಯ ಪರಿಸರದಲ್ಲಿ ಕಾಣಿಸಿಕೊಳ್ಳುವ ಮಿಡತೆಗಳು ರೆಂಜಿಲಾಡಿ ಪರಿಸರದಲ್ಲಿ ಕಂಡು ಬಂದಿವೆ. ಕೃಷಿಕರು ಆತಂಕ ಪಡಬೇಕಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ.

– ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.