ADVERTISEMENT

ಥಳಿತದ ಆರೋಪ: ದೂರು–ಪ್ರತಿ ದೂರು ದಾಖಲು

ಜಾನುವಾರು ಸಾಗಣೆ ತಡೆದ ಬಜರಂಗದಳ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 15:34 IST
Last Updated 14 ಜೂನ್ 2020, 15:34 IST
ಜಾನುವಾರ ಸಾಗಣೆ ಮಾಡುತ್ತಿದ್ದ ರಹ್ಮಾನ್‌ ಅವರನ್ನು ವಾಹನಕ್ಕೆ ಕಟ್ಟಿರುವುದು
ಜಾನುವಾರ ಸಾಗಣೆ ಮಾಡುತ್ತಿದ್ದ ರಹ್ಮಾನ್‌ ಅವರನ್ನು ವಾಹನಕ್ಕೆ ಕಟ್ಟಿರುವುದು   

ಮಂಗಳೂರು: ಜೋಕಟ್ಟೆಯಿಂದ ಕುದ್ರೋಳಿಯ ಕಸಾಯಿಖಾನೆಗೆ ಎಮ್ಮೆ ಸಾಗಣೆ ಮಾಡುತ್ತಿದ್ದ ವ್ಯಾಪಾರಿಯನ್ನು ಬಜರಂಗದಳದ ಕಾರ್ಯಕರ್ತರು ವಾಹನಕ್ಕೆ ಕಟ್ಟಿ ಥಳಿಸಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಜೋಕಟ್ಟೆ ನಿವಾಸಿ ಅಬ್ದುಲ್‌ ರಹ್ಮಾನ್‌ ಭಾನುವಾರ ಬೆಳಿಗ್ಗೆ ತನ್ನ ಮನೆಯಲ್ಲಿದ್ದ ನಾಲ್ಕು ಎಮ್ಮೆಗಳನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದರು. ಈ ನಡುವೆ, ಬಜರಂಗದಳದ ಕಾರ್ಯಕರ್ತರು ನಗರದ ಉರ್ವದ ಇನ್ಫೊಸಿಸ್‌ ಕಚೇರಿಯ ಸಮೀಪ ವಾಹನವನ್ನು ತಡೆದು ನಿಲ್ಲಿಸಿದ್ದು, ವಾಹನದಿಂದ ರಹ್ಮಾನ್‌ ಅವರನ್ನು ಕೆಳಗೆ ಇಳಿಸಿ, ವಾಹನಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು, ವ್ಯಾಪಾರಿ ಹಾಗೂ ಎಮ್ಮೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಪೊಲೀಸರು, ರಹ್ಮಾನ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ಹಾಗೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದಾರೆ. ನಂತರ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿವೆ.

ADVERTISEMENT

ಪೊಲೀಸರು ವಶಕ್ಕೆ ಪಡೆಯಲಾದ ಎಮ್ಮೆಗಳು ಸೇರಿದಂತೆ ಒಟ್ಟು 10 ಜಾನುವಾರುಗಳನ್ನು ರಹ್ಮಾನ್‌ ಅವರು ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೃಷಿ ಮಾರುಕಟ್ಟೆಯಿಂದ ಖರೀದಿ ಮಾಡಿದ್ದರು. ಹತ್ತು ಜಾನುವಾರಗಳಲ್ಲಿ ಈಗಾಗಲೇ ಆರನ್ನು ಮಾರಾಟ ಮಾಡಿದ್ದು, ಉಳಿದ ನಾಲ್ಕು ಎಮ್ಮೆಗಳನ್ನು ತಮ್ಮ ಮನೆಯಲ್ಲಿ ಉಳಿಸಿಕೊಂಡಿದ್ದರು. ಭಾನುವಾರ ಜೋಕಟ್ಟೆಯಿಂದ ಕುದ್ರೋಳಿಗೆ ಸಾಗಣೆ ಮಾಡುವಾಗ ಈ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.