ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಿಂದ ಭಕ್ತರ ತಂಡವೊಂದು ಅಮರನಾಥ ಯಾತ್ರೆಗೆ ತೆರಳಿದ್ದು, ಅಲ್ಲಿ ಸಂಭವಿಸಿರುವ ದಿಢೀರ್ ಪ್ರವಾಹದಿಂದ ಈ ತಂಡಕ್ಕೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ತಂಡದಲ್ಲಿದ್ದ ಸದಸ್ಯರು ತಿಳಿಸಿದ್ದಾರೆ.
‘ನಾವು ಸುರಕ್ಷಿತವಾಗಿದ್ದೇವೆ. ದಿಢೀರ್ ಪ್ರವಾಹದಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ' ಎಂದುತಂಡದಲ್ಲಿದ್ದ ಯಾತ್ರಿಕ ತಿಲಕರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ರಾಯಿ ಗ್ರಾ.ಪಂ.ಸದಸ್ಯ ಸಂತೋಷ್ ಕುಮಾರ್ ಬೆಟ್ಟು, ಸುರೇಶ ಕೋಟ್ಯಾನ್ ಮತ್ತಿತರರು ಸೇರಿ 30 ಮಂದಿ ತಂಡದಲ್ಲಿದ್ದರು ಎಂದು ಗೊತ್ತಾಗಿದೆ.
‘ಸೈನಿಕರು ನಮ್ಮನ್ನು 100 ಕಿ.ಮೀ.ನಷ್ಟು ದೂರದವರೆಗೆ ತಲುಪಿಸಿದ್ದಾರೆ. ಇನ್ನು 28 ಕಿ.ಮೀ ಸಾಗಿದರೆ ಅಮರನಾಥ ದರ್ಶನ ಭಾಗ್ಯ ಸಿಗಲಿದೆ. ನಿನ್ನೆ ಸಂಭವಿಸಿದ ದಿಢೀರ್ ಪ್ರವಾಹದಿಂದ ಕೆಲವು ಕಡೆ ಮಾತ್ರ ಸಮಸ್ಯೆ ಆಗಿದೆ. ನಮಗೆ ಯಾವುದೇ ಸಮಸ್ಯೆ ಇಲ್ಲ’ ಸುರೇಶ್ ಕೋಟ್ಯಾನ್ ತಿಳಿಸಿದ್ದಾರೆ.
‘ದಕ್ಷಿಣ ಕನ್ನಡ ಜಿಲ್ಲೆಯಿಂದ ಅಮರನಾಥ ಯಾತ್ರೆ ಕೈಗೊಂಡವರು ದಿಢೀರ್ ಪ್ರವಾಹದ ಸಂದರ್ಭದಲ್ಲಿ ಪ್ರವಾಹಕ್ಕೆ ಸಿಲುಕಿದ್ದರೆ ಅಥವಾ ಅಲ್ಲೇ ಸುರಕ್ಷಿತವಾಗಿ ಇದ್ದಲ್ಲಿ ನಿಯಂತ್ರಣ ಕೊಠಡಿಯ ಶುಲ್ಕರಹಿತ ಸಂಖ್ಯೆಯನ್ನು (1077) ಸಂಪರ್ಕಿಸಬಹುದು’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
’ದಕ್ಷಿಣ ಕನ್ನಡ ಜಿಲ್ಲೆಯಿಂದ ಅಮರನಾಥಕ್ಕೆ ತೆರಳಿದ ಯಾವುದೇ ಯಾತ್ರಿಕರು ನಮ್ಮನ್ನು ಇದುವರೆಗೆ ಸಂಪರ್ಕಿಸಿಲ್ಲ. ಯಾರಾದರೂ ಯಾತ್ರಿಕರು ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿದರೆ ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ವ್ಯವಸ್ಥೆ ಕಲ್ಪಿಸಲಿದ್ದೇವೆ‘ ಎಂದು ರಾಜೇಂದ್ರ ಕೆ.ವಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.