ADVERTISEMENT

ಇಂದು ಮಂಗಳೂರಿಗೆ ಶಾ ಭೇಟಿ; ಆರು ಜಿಲ್ಲೆಗಳ ಕೋರ್‌ ಕಮಿಟಿ ಸಭೆಯಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 21:49 IST
Last Updated 10 ಫೆಬ್ರುವರಿ 2023, 21:49 IST
ಶಾ
ಶಾ   

ಮಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಂಗಳೂರು ಭೇಟಿ ಬಿಜೆಪಿ ಕಾರ್ಯಕರ್ತರು, ನಾಯಕರಲ್ಲಿ ಸಂಚಲನ ಮೂಡಿಸಿದೆ.

ಅಡಿಕೆ ವಹಿವಾಟು ನಡೆಸುವ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಫೆ.11ರಂದು ಬರುವ ಅಮಿತ್ ಶಾ, ಅಲ್ಲಿಂದ ನೇರವಾಗಿ ಸಂಜೆ 5.20ಕ್ಕೆ ಮಂಗಳೂರಿಗೆ ಬರಲಿದ್ದಾರೆ. ನಗರದ ಹೊರವಲಯದ ಕೆಂಜಾರಿನಲ್ಲಿ ನಡೆಯುವ ವಿಶೇಷ ಸಭೆಯಲ್ಲಿ ಕೆಲಕಾಲ ಮಾತನಾಡಿ, ಅವರು ನಂತರ ಶ್ರೀದೇವಿ ಕಾಲೇಜಿನಲ್ಲಿ ನಡೆಯುವ ‘ಮಂಗಳೂರು, ಶಿವಮೊಗ್ಗ ವಿಭಾಗಗಳ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬಿಜೆಪಿ ಭದ್ರ ನೆಲೆಯಾಗಿರುವ ಕರಾವಳಿಯಲ್ಲಿ ಇತ್ತೀಚೆಗೆ ನಡೆದಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ನಂತರ ಕರಾವಳಿಯಲ್ಲಿನ ರಾಜಕೀಯ ಬೆಳವಣಿಗೆಗಳು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಮೇಲಿನ ಬೇಸರ, ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಇಂತಹ ಅನೇಕ ಸಂಗತಿಗಳು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳು ಇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

118 ಜನರಿಗೆ ಅವಕಾಶ: ‘ಕೋರ್ ಕಮಿಟಿ ಸಭೆಯಲ್ಲಿ 118 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ ಎಂದು
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಎಂ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.