ಮಂಗಳೂರು: ಬಕ್ರೀದ್ ಹಾಗೂ ಇತರೆ ಹಬ್ಬ ಹರಿದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೂಜಾ ಸ್ಥಳಗಳು ಮತ್ತು ಮಂದಿರಗಳಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾಯ್ದೆಯ ಪ್ರಕಾರ ಪ್ರಾಣಿ ಅಥವಾ ಕೋಳಿ ಬಲಿ ಕೊಡುವುದನ್ನು ನಿಷೇಧಿಸಲಾಗಿದೆ. ಕರ್ನಾಟಕ ಗೋವಧೆ ಪ್ರತಿಬಂಧಕ ಕಾಯ್ದೆ ಹಾಗೂ ಜಾನುವಾರು ಪರಿರಕ್ಷಣಾ ಕಾಯ್ದೆ 1964ರ ಸೆಕ್ಷನ್ 4ರ ಪ್ರಕಾರ ಗೋವು ಅಥವಾ ಎಮ್ಮೆಯ ಕರುವಿನ ವಧೆಯನ್ನೂ ನಿಷೇಧಿಸಲಾಗಿದೆ. ಈ ಕಾಯ್ದೆಗಳ ಅನುಸಾರವಾಗಿ ಜಿಲ್ಲೆಯ ಪೂಜಾ ಸ್ಥಳಗಳು ಅಥವಾ ಮಂದಿರಗಳಲ್ಲಿ ಪ್ರಾಣಿ/ ಕೋಳಿ ಬಲಿಯನ್ನು ಮಾಡಬಾರದು. ಅದನ್ನು ಬೆಂಬಲಿಸಲೂಬಾರದು ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕಾನೂನು ಉಲ್ಲಂಘಿಸಿ ಪ್ರಾಣಿ ಬಲಿ ನಡೆಸಿದರೆ ಅಥವಾ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.