ADVERTISEMENT

ಮಂಗಳೂರು | ಮತ್ತೊಬ್ಬ ವ್ಯಕ್ತಿಗೆ ಸೋಂಕು ದೃಢ

ಕೋವಿಡ್–19 ಸೋಂಕಿತ ಇಬ್ಬರು ವೃದ್ಧೆಯರ ಸ್ಥಿತಿ ನಾಜೂಕು

​ಪ್ರಜಾವಾಣಿ ವಾರ್ತೆ
Published 6 ಮೇ 2020, 10:19 IST
Last Updated 6 ಮೇ 2020, 10:19 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮತ್ತೊಬ್ಬ ವ್ಯಕ್ತಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ.

ಬೋಳೂರಿನ 58 ವರ್ಷದ ವೃದ್ಧೆ (ಪಿ.536)ಯ ಪ್ರಾಥಮಿಕ ಸಂಪರ್ಕದಿಂದ 51 ವರ್ಷದ ಪುರುಷನಿಗೆ ಕೋವಿಡ್–19 ಇರುವುದು ಮಂಗಳವಾರ ದೃಢಪಟ್ಟಿದೆ. ರೋಗಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ಪೈಕಿ 51 ವರ್ಷದ ಪುರುಷನಿಗೆ ಸೋಂಕು ಇರುವುದು ಖಚಿತವಾಗಿದೆ. ಇವರು ಬೋಳೂರಿನ ನಿವಾಸಿಯಾಗಿದ್ದು, ನಗರದ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಬೋಳೂರಿನ 58 ವರ್ಷದ ಮಹಿಳೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ 15 ದಿನಗಳ ಹಿಂದೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಇಲ್ಲಿ ರೋಗಿ ಸಂಖ್ಯೆ 501ರ ಸಂಪರ್ಕಕ್ಕೆ ಬಂದಿದ್ದ ಇವರಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಇದಾದ ಬಳಿಕ ಇದೇ 1 ರಂದು ಈ ಮಹಿಳೆಯ 62 ವರ್ಷದ ಪತಿಯಲ್ಲೂ ಸೋಂಕು ದೃಢಪಟ್ಟಿತ್ತು.

ADVERTISEMENT

ಒಂದೇ ಪ್ರದೇಶದಲ್ಲಿ ಮೂರನೇ ವ್ಯಕ್ತಿಗೆ ಸೋಂಕು: ಬೋಳೂರು ಪ್ರದೇಶದಲ್ಲಿ ಮೂರನೇ ವ್ಯಕ್ತಿಗೆ ಸೋಂಕು ತಗಲಿದೆ. ಇದರಿಂದಾಗಿ ನಗರ ವ್ಯಾಪ್ತಿಯಲ್ಲಿ ಕೋವಿಡ್‌–19 ನ ಐದು ಪ್ರಕರಣಗಳು ದೃಢವಾಗಿವೆ.

ಈಗಾಗಲೇ ಬೋಳೂರು, ಶಕ್ತಿನಗರ ಕಕ್ಕೆಬೆಟ್ಟು, ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಯ ಪ್ರದೇಶಗಳನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಗುರುತಿಸಲಾಗಿದ್ದು, ಇನ್ಸಿಡೆಂಟ್‌ ಕಮಾಂಡರ್‌ ನೇತೃತ್ವದಲ್ಲಿ ಅಗತ್ಯ ಸಾಮಗ್ರಿಗಳ ಪೂರೈಕೆ ಮಾಡಲಾಗುತ್ತಿದೆ.

ಇಬ್ಬರ ಸ್ಥಿತಿ ನಾಜೂಕು: ವೆನ್ಲಾಕ್ ಆಸ್ಪತ್ರೆಯ ವರದಿಯ ಪ್ರಕಾರ ಒಟ್ಟು 10 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 8 ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಕೋವಿಡ್‌–19 ಸೋಂಕಿಗೆ ಒಳಗಾಗಿರುವ 80 ವರ್ಷದ ವೃದ್ಧೆ ಹಾಗೂ 58 ವರ್ಷದ ವೃದ್ಧೆಯ ಆರೋಗ್ಯ ಸ್ಥಿತಿ ನಾಜೂಕಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಶಕ್ತಿನಗರ ಕಕ್ಕೆಬಟ್ಟು ನಿವಾಸಿ 80 ವರ್ಷದ ವೃದ್ಧೆಯು ಅಧಿಕ ರಕ್ತದೊತ್ತಡ ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಬೋಳೂರಿನ ವೃದ್ಧೆ ಮಿದುಳಿನ ಸೋಂಕಿ (ಕ್ಷಯರೋಗ)ನಿಂದ ಬಳಲುತ್ತಿದ್ದು, ಐಸಿಯುನಲ್ಲಿ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದುವರೆಗೆ ಜಿಲ್ಲೆಯಿಂದ ಒಟ್ಟು 3,779 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 3,611 ಮಂದಿ ವರದಿ ಜಿಲ್ಲಾಡಳಿತದ ಕೈಸೇರಿದೆ. ಇದರಲ್ಲಿ 3,586 ಮಂದಿಯ ವರದಿ ನೆಗೆಟಿವ್‌ ಬಂದಿದ್ದು, 25 ಪ್ರಕರಣಗಳಲ್ಲಿ ಸೋಂಕು ದೃಢವಾಗಿದೆ. ಈ ಪೈಕಿ 6 ಜನರು ಹೊರ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.