ADVERTISEMENT

ಸುರತ್ಕಲ್‌ ಭಾಗದಲ್ಲಿ ವಿದ್ಯುತ್‌ ಚಿತಾಗಾರ

ಸ್ಮಾರ್ಟ್‌ ಸಿಟಿಯಡಿ ಯೋಜನೆಯಡಿ ನಿರ್ಮಿಸಲು ಮೇಯರ್‌ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:41 IST
Last Updated 16 ಜುಲೈ 2020, 17:41 IST

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್–19 ನಿಂದ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮೃತರ ಅಂತ್ಯಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೀಗ ಸುರತ್ಕಲ್‌ ಭಾಗದಲ್ಲಿ ಇನ್ನೊಂದು ವಿದ್ಯುತ್‌ ಚಿತಾಗಾರ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

ನಗರದ ಬೋಳೂರಿನಲ್ಲಿ ಈಗಾಗಲೇ ವಿದ್ಯುತ್‌ ಚಿತಾಗಾರವಿದ್ದು, ಕೋವಿಡ್–19 ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತಿದೆ. ಆರಂಭದಲ್ಲಿ ಕೆಲ ವಿರೋಧ ವ್ಯಕ್ತವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಬೋಳೂರು ವಿದ್ಯುತ್‌ ಚಿತಾಗಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಯಾವುದೇ ವಿರೋಧವಿಲ್ಲದೇ ಅಂತ್ಯಕ್ರಿಯೆ ನಡೆಯುತ್ತಿವೆ.

ಆದರೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಸುರತ್ಕಲ್‌ ಭಾಗದಲ್ಲಿ ವಿದ್ಯುತ್‌ ಚಿತಾಗಾರದ ಕೊರತೆ ಇದ್ದು, ಇದೀಗ ಹೊಸ ಚಿತಾಗಾರ ನಿರ್ಮಾಣ ಮಾಡಬೇಕು ಎಂದು ಮೇಯರ್‌ ದಿವಾಕರ ಪಾಂಡೇಶ್ವರ ಪ್ರಸ್ತಾವ ಸಲ್ಲಿಸಿದ್ದಾರೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದ್ದು, ಇದರಿಂದ ಸುರತ್ಕಲ್‌ ಭಾಗದ ಕೊರತೆಯನ್ನು ನೀಗಿಸಿದಂತಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಸ್ತಾವದ ಕುರಿತು ಜಿಲ್ಲಾಡಳಿತ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಸಭೆಯಲ್ಲಿ ಮಂಡಿಸಿದ ನಂತರ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಸುರತ್ಕಲ್‌ ಭಾಗದಲ್ಲಿ ಕೋವಿಡ್–19ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದ ಜಿಲ್ಲಾಡಳಿತದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಒಂದೇ ಚಿತಾಗಾರವನ್ನು ಅವಲಂಬಿಸದೇ, ಇನ್ನೊಂದು ಚಿತಾಗಾರ ನಿರ್ಮಾಣ ಮಾಡುವುದು ಉತ್ತಮ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಹೀಗಾಗಿ ಹೊಸ ಚಿತಾಗಾರಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.