ಸಾವು
(ಪ್ರಾತಿನಿಧಿಕ ಚಿತ್ರ)
ಮಂಗಳೂರು: ನಗರದ ಹೊರವಲಯದ ಅರ್ಕುಳದಲ್ಲಿ ವ್ಯಕ್ತಿಯೊಬ್ಬರಿಗೆ ಸ್ಥಳೀಯರೊಬ್ಬರು ಕೋಲಿನಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಆ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮೃತರನ್ನು ಲೋಕಯ್ಯ ಟಿ. ಅಲಿಯಾಸ್ ಲೋಕಯ್ಯ ಮೂಲ್ಯ (59) ಎಂದು ಗುರುತಿಸಲಾಗಿದೆ. ಅವರಿಗೆ ರಮೇಶ್ ಗಾಣಿಗ ಎಂಬುವರು ಶನಿವಾರ ಕೋಲಿನಿಂದ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸದಂತೆ ಗಣೇಶ್ ಎಂಬುವರು ತಡೆದಿದ್ದರು. ಹಲ್ಲೆಗೊಳಗಾದ ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸ್ಥಳೀಯರು ಸೇರಿ ವೆನ್ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆ ತಲುಪುವಷ್ಟರಲ್ಲಿ ಗಾಯಾಳು ಅಸುನೀಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಅರ್ಕುಳದ ಲಕ್ಷ್ಮೀ ಫಾಸ್ಟ್ ಫುಡ್ ಹೋಟೆಲ್ ಬಳಿ ಲೋಕಯ್ಯ ಅವರ ಮೇಲೆ ರಮೇಶ್ ಗಾಣಿಗ ಎಂಬಾತ ಶನಿವಾರ ರಾತ್ರಿ ಕೋಲಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ. ಈ ಬಗ್ಗೆ ವಿಚಾರಿಸಿದಾಗ, ಲೋಕಯ್ಯ ನಿತ್ಯವೂ ಮಧ್ಯ ರಾತ್ರಿ ಮನೆ ಬಾಗಿಲನ್ನು ತಟ್ಟಿ ಕಿರುಕುಳ ನೀಡುತ್ತಾರೆ ಎಂದು ರಮೇಶ್ ಆರೋಪಿಸಿದ್ದ ಎಂಬುದಾಗಿ ಗಣೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.