ಉಳ್ಳಾಲ: ರಸ್ತೆ ನಿಯಮ ಉಲ್ಲಂಘಿಸಿ ಬೈಕ್ ಚಲಾಯಿಸುತ್ತಿರುವುದನ್ನು ಗಮನಿಸಿ ಸವಾರನ ಫೋಟೊ ತೆಗೆದ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಬೈಕ್ ಸವಾರರಿಬ್ಬರು ಹಲ್ಲೆ ನಡೆಸಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ತೊಕ್ಕೊಟ್ಟು ಬಸ್ ನಿಲ್ದಾಣದ ಹೊರಗಡೆ ಶುಕ್ರವಾರ ಕರ್ತವ್ಯದಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಸಂಗಣ್ಣಗೌಡ ಹಲ್ಲೆಗೊಳಗಾದವರು. ಮದನಿ ನಗರ ಮಸೀದಿ ಸಮೀಪ ಜ್ಯೋತಿ ಫ್ಲ್ಯಾಟ್ ನಿವಾಸಿ ಮಹಮ್ಮದ್ ಅಝರುದ್ದೀನ್ (32) ಎಂಬಾತನನ್ನು ಬಂಧಿಸಲಾಗಿದೆ. ಸಹಸವಾರ ರಿಯಾಝ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಅಝರುದ್ದೀನ್ ಮತ್ತು ರಿಯಾಝ್ ಹೆಲ್ಮೆಟ್ ಧರಿಸದೆ, ನೋಂದಣಿ ಸಂಖ್ಯೆ ಇಲ್ಲದ ಬೈಕಿನಲ್ಲಿ ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ಬರುತ್ತಿದ್ದರು. ಇದನ್ನು ಗಮನಿಸಿದ ಸಂಗಣ್ಣ ಗೌಡ ಮೊಬೈಲ್ ಮೂಲಕ ಫೋಟೊ ತೆಗೆದಿದ್ದರು. ಇದರಿಂದ ಕುಪಿತಗೊಂಡ ಸವಾರರಿಬ್ಬರು ಬೈಕ್ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ , ಪೇದೆಯ ಎಡಕೆನ್ನೆ, ಎದೆಯ ಭಾಗಕ್ಕೆ ಕೈಯಲ್ಲಿ ಹಲ್ಲೆ ನಡೆಸಿದ್ದರು. ಕೈಕಾಲು ಮುರಿದು ಕೊಲ್ಲುವ ಬೆದರಿಕೆಯನ್ನೂ ಒಡ್ಡಿದ್ದರು. ಗಾಯಗೊಂಡ ಸಂಗಣ್ಣ ಗೌಡ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಧ್ಯಾಹ್ನದ ವೇಳೆಗೆ ಅಝರ್ನನ್ನು ಪೊಲೀಸರು ಬಂಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.