ಮಂಗಳೂರು: ಬಾಲಯಕ್ಷ ಕೂಟ ಕದ್ರಿ ವತಿಯಿಂದ ಎರಡು ದಿನಗಳ ‘ದ್ವಿದಿನ ಧೀಂಗಿಣ ಸಂಭ್ರಮ’ ಯಕ್ಷಗಾನ ಪ್ರದರ್ಶನ ಮತ್ತು ಯಕ್ಷ ವೈದ್ಯ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ‘ಕೊರೊನಾದಿಂದ ವಿಶ್ವದಲ್ಲಿ ಜಡತ್ವ ಆವರಿಸಿದೆ. ಹಿಂದೆ ಕೂಡಾ ವಿಶ್ವಕ್ಕೆ ಜಡತ್ವ ಆವರಿಸಿದಾಗ ಕೃಷ್ಣ ಪರಮಾತ್ಮ ಗೀತೆಯ ಮೂಲಕ ಜ್ಞಾನ ನೀಡಿದ. ಈಗ ಜಡತ್ವವನ್ನು ಕಲೆಯ ಮೂಲಕ ನಿವಾರಿಸಿಕೊಳ್ಳುವ ಪ್ರಯತ್ನ ಶ್ಲಾಘನೀಯ’ ಎಂದರು.
ಬಾಲಯಕ್ಷ ಕೂಟದ ಗೌರವಾಧ್ಯಕ್ಷ ದಿನೇಶ್ ದೇವಾಡಿಗ ಕದ್ರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ಬಾಲ ಯಕ್ಷಕೂಟದ ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ನವರಾತ್ರಿ ಸಮಿತಿ ಅಧ್ಯಕ್ಷ ವಿಷ್ಣುಮೂರ್ತಿ ಕುಳಾಯಿ, ನಮ್ಮಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೆರ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಒಎಂಪಿಲ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಉಪ ಮಹಾಪ್ರಬಂಧಕ ಆರ್.ಕೆ.ರಾವ್. ಇದ್ದರು.
ಯಕ್ಷವೈದ್ಯ ಪುರಸ್ಕಾರ: ಕೊರೊನಾ ಸಂಕಷ್ಟ ಕಾಲದಲ್ಲಿ ವಾರಿಯರ್ ಆಗಿ ಕೆಲಸ ಮಾಡುತ್ತಿರುವ, ತೆಂಕು, ಬಡಗುತಿಟ್ಟಿನ ಸವ್ಯಸಾಚಿ ಕಲಾವಿದ, ಮಣಿಪಾಲ ಕೆ.ಎಂ.ಸಿ.ಯ ಮಕ್ಕಳ ತಜ್ಞ ಡಾ. ಸುನೀಲ್ ಮುಂಡ್ಕೂರ್ ಅವರಿಗೆ ‘ಯಕ್ಷ ವೈದ್ಯ ಪುರಸ್ಕಾರ’ ಪ್ರದಾನ ಮಾಡಲಾಯಿತು. ಸಂಚಾಲಕ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಕಾಯದರ್ಶಿ ಪುರುಷೋತ್ತಮ ಭಂಡಾರಿ ಸಮಾರೋಪ ಭಾಷಣ ಮಾಡಿದರು. ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ: ಕದ್ರಿ ರಾಮಚಂದ್ರ ಭಟ್ ಎಲ್ಲೂರು ನಿರ್ದೇಶನದಲ್ಲಿ ದಯಾನಂದ ಕೋಡಿಕಲ್ ಭಾಗವತಿಕೆಯಲ್ಲಿ ಮೊದಲನೇ ದಿನ ಬಾಲ ಯಕ್ಷಕೂಟ ಮತ್ತು ಮಹಿಳಾ ಯಕ್ಷಕೂಟ ವತಿಯಿಂದ ‘ಗದಾಯುದ್ಧ’, ಎರಡನೇ ದಿನ ಯಕ್ಷಕೂಟದ ವತಿಯಿಂದ ‘ಬಬ್ರುವಾಹನ’ ಯಕ್ಷಗಾನ ಪ್ರದರ್ಶನಗೊಂಡವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.