ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸರ್ಕಾರಿ ಬಸ್ ನಿಲ್ದಾಣ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳೀಯ ಶಂಭೂರು ಗ್ರಾಮದ ಕೊಪ್ಪಲ ನಿವಾಸಿ ಚಿದಾನಂದ (52) ಮೃತಪಟ್ಟವರು. ಬಿ.ಸಿ.ರೋಡು ಕಡೆಯಿಂದ ಬಂದು ಅಜ್ಜಿಬೆಟ್ಟು ಕ್ರಾಸ್ ಎಂಬಲ್ಲಿ ತಿರುವು ಪಡೆಯುತ್ತಿದ್ದ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿಯಾಗಿದೆ. ಈ ವೇಳೆ ಲಾರಿ ಚಕ್ರದಡಿ ಸಿಲುಕಿ ಅವರು ಮೃತಪಟ್ಟಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಚಿದಾನಂದ ಅವರು ಬಂಟ್ವಾಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಯಾಗಿದ್ದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ಈ ತಿರುವು ರಸ್ತೆಯಲ್ಲಿ ಪದೇ ಪದೇ ಅಪಘಾತ ಉಂಟಾಗುತ್ತಿದ್ದು, ಬಿ.ಸಿ.ರೋಡು-ಮಂಗಳೂರು ಕಡೆಯಿಂದ ಬರುವ ವಾಹನಗಳ ನಡುವೆ ಸರ್ಕಾರಿ ಬಸ್ ನಿಲ್ದಾಣದಿಂದ ಪುತ್ತೂರು ಕಡೆಗೆ ಸಂಚರಿಸುವ ಬಸ್ ಇಲ್ಲೇ ತಿರುವು ಪಡೆಯಬೇಕಿದೆ. ಈ ನಡುವೆ ಬಿ.ಸಿ.ರೋಡು ಮೇಲ್ಸೇತುವೆಯಲ್ಲಿ ಮಂಗಳೂರು ಕಡೆಗೆ ವೇಗವಾಗಿ ಬರುವ ವಾಹನಗಳ ನಡುವೆ ಅಪಘಾತ ನಡೆಯುತ್ತಿದೆ. ಈ ಕಾರಣದಿಂದ ಇಲ್ಲೂ ವೃತ್ತ ನಿರ್ಮಿಸಬೇಕು ಎಂಬ ಬೇಡಿಕೆ ಕೇಳಿ ಬಂದಿದೆ. ಇದೇ ರಸ್ತೆ ಬಳಿ ಹೊಸ ಬಸ್ ತಂಗುದಾಣ ನಿರ್ಮಾಣಗೊಂಡಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.