ಬಂಟ್ವಾಳ: ಕೇಂದ್ರ ಸರ್ಕಾರದ ಅಮೃತ ಭಾರತ್ ಯೋಜನೆಯಡಿ ₹28.49 ಕೋಟಿ ವೆಚ್ಚದಲ್ಲಿ ಇಲ್ಲಿನ ಬಿ.ಸಿ.ರೋಡು ರೈಲ್ವೆ ನಿಲ್ದಾಣ ಪುನರ್ ನಿರ್ಮಾಣಗೊಂಡು ಹೊಸ ರೂಪ ಪಡೆದಿದೆ.
2024ರ ಫೆಬ್ರುವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಪ್ರಯಾಣಿಕರ ಬಹು ಬೇಡಿಕೆಯ ಪಾದಚಾರಿಗಳಿಗೆ ಮೇಲ್ಸೇತುವೆ ಈಗಾಗಲೇ ನಿರ್ಮಾಣಗೊಂಡಿದೆ. ವಾಹನ ನಿಲುಗಡೆಗೆ ಶೆಲ್ಟರ್, ಆಕರ್ಷಕ ಗಾರ್ಡನ್, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣಗೊಂಡಿವೆ. ಈ ಹಿಂದೆ ಸಣ್ಣ ಗೂಡಿನಂತಿದ್ದ ಮುಂಗಡ ಟಿಕೆಟ್ ಕಾಯ್ದಿರಿಸುವ ಸ್ಥಳ ವಿಸ್ತಾರಗೊಂಡು ಹೊಸ ರೂಪ ಪಡೆದುಕೊಂಡಿದೆ.
ವಿಶೇಷತೆ: ಒಂದು ಕ್ಯಾಂಟೀನ್ ಸಹಿತ ನಾಲ್ಕು ಕ್ಯಾಟರಿಂಗ್ ಸ್ಟಾಲ್, ಗ್ರಾನೈಟ್ ನೆಲಹಾಸು ಮತ್ತು ಕೆಲವೆಡೆ ಟೈಲ್ಸ್ ಅಳವಡಿಕೆ, ಪ್ಲಾಟ್ ಫಾರ್ಮ್ ಉದ್ದಕ್ಕೂ ಶೆಲ್ಟರ್ ನಿರ್ಮಾಣ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ವೈಫೈ ಸೌಲಭ್ಯ, ಎಲ್.ಇ.ಡಿ. ಪರದೆ ಮೇಲೆ ರೈಲು ಓಡಾಟದ ಸಮಯ ಮತ್ತಿತರ ಮಾಹಿತಿ ಸಿಗಲಿದೆ. ಹಳಿ ವಿದ್ಯುದೀಕರಣ ಕಾಮಗಾರಿ ನಡೆದಿದೆ. ಹಲವಾರು ವರ್ಷಗಳಿಂದ ಹೈಟಕ್ ರೈಲ್ವೆ ನಿಲ್ದಾಣದ ನಿರೀಕ್ಷೆಯಲ್ಲಿದ್ದ ಇಲ್ಲಿನ ಜನರಿಗೆ ಸುಸಜ್ಜಿತ ರೈಲ್ವೆ ನಿಲ್ದಾಣ ಸಂತಸ ತಂದಿದೆ.
ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸಂಬಂಧಪಟ್ಟ ಎಂಜಿನಿಯರ್ ಮತ್ತಿತರ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಕ್ಯಾ. ಬ್ರಿಜೇಶ್ ಚೌಟ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.