ADVERTISEMENT

ಸ್ವಂತ ಭವನದ ಕನಸು ಶೀಘ್ರ ನನಸು

ಬ್ಯಾರಿ ಸಾಹಿತ್ಯ ಅಕಾಡಮಿ ಕಚೇರಿ ಉದ್ಘಾಟನೆಯಲ್ಲಿ ಸಚಿವ ಕೋಟ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 14:52 IST
Last Updated 15 ಜೂನ್ 2020, 14:52 IST
ಸ್ಥಳಾಂತರಗೊಂಡ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿ ಕಟ್ಟಡವನ್ನು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಸ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು–ಪ್ರಜಾವಾಣಿ ಚಿತ್ರ
ಸ್ಥಳಾಂತರಗೊಂಡ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿ ಕಟ್ಟಡವನ್ನು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಸ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು–ಪ್ರಜಾವಾಣಿ ಚಿತ್ರ   

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಸೋಮವಾರ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿಯ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ಅಕಾಡೆಮಿಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಬ್ಯಾರಿ ಅಕಾಡೆಮಿಯು ಲಾಕ್‍ಡೌನ್ ಅವಧಿಯಲ್ಲಿ ಜನಪರ ಕೆಲಸ ಮಾಡಿದೆ. ಅಕಾಡೆಮಿ ಸ್ವಂತ ಕಟ್ಟಡ ಹೊಂದುವ ಕನಸನ್ನು ಆದಷ್ಟು ಬೇಗ ನನಸು ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, ‘ಬ್ಯಾರಿ ಅಕಾಡೆಮಿ ಸ್ವಂತ ಭವನಕ್ಕೆ ನಿವೇಶನ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾರಿ ಭವನ ನಿರ್ಮಾಣಕ್ಕೆ ಸರ್ಕಾರ ₹6 ಕೋಟಿ ಮಂಜೂರು ಮಾಡಿದೆ. ಆ ಪೈಕಿ ₹3 ಕೋಟಿ ಬಿಡುಗಡೆಯಾಗಿದೆ. ನಿವೇಶನ ಸಿಕ್ಕಿದ ತಕ್ಷಣ ಬ್ಯಾರಿ ಭವನ ನಿರ್ಮಿಸಿ ಅಕಾಡಮಿಯ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದರು.

ADVERTISEMENT

‘ಲಾಕ್‍ಡೌನ್ ಸಂದರ್ಭ ಸಂಕಷ್ಟಕ್ಕೀಡಾದ 261 ಸಾಹಿತಿ-ಕಲಾವಿದರಿಗೆ ತಲಾ ₹2 ಸಾವಿರ ಸಹಾಯಧನ ನೀಡಲಾಗಿದೆ. ಅರ್ಹ 140 ಮಂದಿಗೆ ಆಹಾರ ಧಾನ್ಯಗಳ ಕಿಟ್ ನೀಡಲಾಗಿದೆ. ಬ್ಯಾರಿ ಕವನ ಸ್ಪರ್ಧೆ, ಮೆಹಂದಿ ಸ್ಪರ್ಧೆ ಆಯೋಜಿಸಿದೆ. ಇದೀಗ `ಮರಕೊಗು ಆವಾತೆ 100 ಬ್ಯಾರಿ' ಗ್ರಂಥ ರಚನೆ, ಬ್ಯಾರಿ ಸಾಹಿತಿ-ಕಲಾವಿದರ ಸಂಪರ್ಕಕ್ಕಾಗಿ ಬ್ಯಾರಿ ಡೈರಿ ರಚನೆ, ಬ್ಯಾರಿ ಅರ್ಚೊ ಮಸಲೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದರು.

ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುಹಮ್ಮದ್ ಮೋನು, ಕಾರ್ಯನಿರ್ವಹಣಾಧಿಕಾರಿ ಸದಾನಂದ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಪೂರ್ಣಿಮಾ, ಸದಸ್ಯರಾದ ಜಲೀಲ್ ಮುಕ್ರಿ, ಮಿಶ್ರಿಯಾ ಮೈಸೂರು, ಚಂಚಲಾಕ್ಷಿ, ಸುರೇಖಾ, ಮುರಳಿ, ರೂಪೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.