ADVERTISEMENT

‘ಬ್ಯಾರಿ ಅಕಾಡೆಮಿಯಿಂದ ಮಹತ್ವದ ಕಾರ್ಯ’

ಬ್ಯಾರಿ–ಕನ್ನಡ–ಇಂಗ್ಲಿಷ್ ಶಬ್ದಕೋಶ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 4:55 IST
Last Updated 22 ನವೆಂಬರ್ 2020, 4:55 IST
ಮಂಗಳೂರಿನಲ್ಲಿ ಶನಿವಾರ ಬ್ಯಾರಿ ಶಬ್ದಕೋಶವನ್ನು ಬಿಡುಗಡೆ ಮಾಡಲಾಯಿತು.
ಮಂಗಳೂರಿನಲ್ಲಿ ಶನಿವಾರ ಬ್ಯಾರಿ ಶಬ್ದಕೋಶವನ್ನು ಬಿಡುಗಡೆ ಮಾಡಲಾಯಿತು.   

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ‘ಬ್ಯಾರಿ-ಕನ್ನಡ-ಇಂಗ್ಲಿಷ್-ಹಿಂದಿ-ರೋಮನ್-ಐಪಿ ಲಿಪಿ’ಯನ್ನು ಒಳಗೊಂಡ ಶಬ್ದಕೋಶದ ಬಿಡುಗಡೆ ಕಾರ್ಯಕ್ರಮವು ನಗರದ ತಾಲ್ಲೂಕು ಪಂಚಾಯಿತಿ ಹೊಸ ಕಟ್ಟಡದಲ್ಲಿ ಶನಿವಾರ ನಡೆಯಿತು.

ಶಬ್ದಕೋಶ ಬಿಡುಗಡೆ ಮಾಡಿ ಮಾತನಾಡಿದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ‘11 ವರ್ಷದಲ್ಲಿ ಭಾಷಾ ಅಕಾಡೆಮಿಗಳ ಪೈಕಿ ಬ್ಯಾರಿ ಸಾಹಿತ್ಯ ಅಕಾಡೆಮಿಯು ಅನೇಕ ಮಹತ್ವದ ಕೆಲಸ ಕಾರ್ಯಗಳನ್ನು ಮಾಡಿದೆ. ಬ್ಯಾರಿಯೇತರರಿಗೆ ಬ್ಯಾರಿ ಭಾಷೆ ಕಲಿಯುವ ಸಲುವಾಗಿ ಹೊಸ ಮಾದರಿಯ ಶಬ್ದಕೋಶ ಹೊರತಂದಿರುವುದು ಶ್ಲಾಘನೀಯ. ಇತ್ತೀಚೆಗಷ್ಟೇ ಅಕಾಡೆಮಿಯು ಹೊಸ ಬ್ಯಾರಿ ಲಿಪಿ ರಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಭವಿಷ್ಯದಲ್ಲಿ ಇದರ ಪರಿಷ್ಕರಣೆಗೆ ಅವಕಾಶ ನೀಡುವ ಅಗತ್ಯವೂ ಇದೆ’ ಎಂದು ಅಭಿಪ್ರಾಯಪಟ್ಟರು.

ಅಖಿಲ ಭಾರತ ಬ್ಯಾರಿ ಪರಿಷತ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಬ್ದಕೋಶ ಕೃತಿಯ ಮಾರ್ಗದರ್ಶಕರಾದ ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್ ಮತ್ತು ಸೇಂಟ್‌ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅಲ್ವಿನ್ ಡೇಸಾ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುಹಮ್ಮದ್ ಮೋನು, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಎಸ್.ಬಿ. ಅಪ್ಪಾಜಿ ಗೌಡ ವೇದಿಕೆಯಲ್ಲಿದ್ದರು.

ಬ್ಯಾರಿ ಭಾಷಾ ದಿನಾಚರಣೆ:ಬ್ಯಾರಿ ಭಾಷಾ ದಿನಾಚರಣೆಯ ಬಗ್ಗೆ ಮಾತನಾಡಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ‘ಬ್ಯಾರಿ ಭಾಷೆಯಲ್ಲಿ ಸಾಕಷ್ಟು ಕೆಲಸ ಆಗುತ್ತಿದ್ದರೂ, ಯುನೆಸ್ಕೋ ಪಟ್ಟಿಯಲ್ಲಿ ಇನ್ನೂ ಬ್ಯಾರಿ ಭಾಷೆಯ ಸೇರ್ಪಡೆ ಆಗಿಲ್ಲ. ಈ ನಿಟ್ಟಿನಲ್ಲಿ ಸಮುದಾಯದ ನಾಯಕರು ಪ್ರಯತ್ನ ನಡೆಸಬೇಕಿದೆ’ ಎಂದರು.

ರಿಜಿಸ್ಟ್ರಾರ್ ಪೂರ್ಣಿಮಾ, ಬ್ಯಾರಿ ಭಾಷೆಯಲ್ಲೇ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಶಂಶೀರ್ ಬುಡೋಳಿ, ರಾಧಾಕೃಷ್ಣ ನಾವಡ ಇದ್ದರು. ಸದಸ್ಯ ಅಬ್ದುಲ್ ರಝಾಕ್ ಸಾಲ್ಮರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.