ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ಸಮೀಪದ ಏಳೂವರೆ ಹಳ್ಳದ ಕಲ್ಲಂಡ ಬಳಿ ಶನಿವಾರ ಸ್ನಾನಕ್ಕೆ ಇಳಿದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಅವರ ಪುತ್ರ, ಉಜಿರೆಯ ಪದವಿಪೂರ್ವ ಕಾಲೇಜೊಂದರ ವಿದ್ಯಾರ್ಥಿ ವಿವೇಕ್ (17) ಮೃತ ವಿದ್ಯಾರ್ಥಿ.
ಶನಿವಾರ ಮಧ್ಯಾಹ್ನ ನಂತರ ಕಾಲೇಜಿಗೆ ರಜೆ ಇದ್ದುದರಿಂದ ಆರೇಳು ಸ್ನೇಹಿತರ ಜೊತೆ ಎರ್ಮಾಯಿ ಫಾಲ್ಸ್ಗೆ ಹೋಗಿ, ತೊಟ್ಲಾಯಿ ಗುಂಡಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಸಮಯ ಈ ಘಟನೆ ನಡೆದಿದೆ. ಮೃತದೇಹವನ್ನು ಮೇಲೆತ್ತಲು ಸ್ಥಳೀಯರು ಸಹಕರಿಸಿದರು.
‘ಕಲ್ಲಂಡ ಪರಿಸರದ ತೊಟ್ಲಾಯಿ ಗುಂಡಿಯಲ್ಲಿ ಫಾಲ್ಸ್ಗೆ ಬರುವ ಮಂದಿ ಸ್ನಾನಕ್ಕೆ ಇಳಿಯುವುದು ಸಾಮಾನ್ಯ. 2019ರ ನೆರೆಯ ಬಳಿಕ ಈ ಗುಂಡಿಯಲ್ಲಿ ಹೂಳು ತುಂಬಿದ್ದು, ಅಷ್ಟೊಂದು ಆಳ ಇರಲಿಲ್ಲ. ಆದರೆ, ಈ ವರ್ಷದ ಮಳೆಗೆ ಹೂಳು ಕೊಚ್ಚಿಕೊಂಡು ಹೋಗಿ ಗುಂಡಿ ಆಳವಾಗಿದೆ. ಇಲ್ಲಿ ಸ್ನಾನ ಮಾಡುವ ಸಮಯ ಬೊಬ್ಬೆ ಹೊಡೆಯುವುದು, ಕಿರುಚಾಟ ಇತ್ಯಾದಿ ಪ್ರವಾಸಿಗರು ಮಾಡುತ್ತಾ ಇರುವುದರಿಂದ ಈ ಬಗ್ಗೆ ಸ್ಥಳೀಯರು ಹೆಚ್ಚಾಗಿ ಗಮನ ಹರಿಸುವುದಿಲ್ಲ. ಸ್ಥಳೀಯರು ಮುನ್ನೆಚ್ಚರಿಕೆ ಹೇಳಿದರೂ ಪ್ರವಾಸಿಗರು ನಮ್ಮೊಂದಿಗೆ ವಾಗ್ವಾದ ಮಾಡಿ ನೀರಿಗೆ ಇಳಿಯುತ್ತಾರೆ’ ಎಂದು ಪರಿಸರದ ಮಂದಿ ದೂರುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.