ADVERTISEMENT

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ: ನಿವ್ವಳ ₹4.84 ಕೋಟಿ ಲಾಭ

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 18ನೇ ವಾರ್ಷಿಕ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 6:48 IST
Last Updated 24 ಆಗಸ್ಟ್ 2025, 6:48 IST
ಬೆಳ್ತಂಗಡಿ ಶ್ರೀಗುರು ಸಾನ್ನಿಧ್ಯ ಸಭಾಭವನದಲ್ಲಿ ನಡೆದ ಬೆಳ್ತಂಗಡಿ ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಭಗೀರಥ ಜಿ. ಮಾತನಾಡಿದರು
ಬೆಳ್ತಂಗಡಿ ಶ್ರೀಗುರು ಸಾನ್ನಿಧ್ಯ ಸಭಾಭವನದಲ್ಲಿ ನಡೆದ ಬೆಳ್ತಂಗಡಿ ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಭಗೀರಥ ಜಿ. ಮಾತನಾಡಿದರು   

ಬೆಳ್ತಂಗಡಿ: ‘ಬೆಳ್ತಂಗಡಿ ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘವು 26 ಶಾಖೆಗಳನ್ನು ಹೊಂದಿದ್ದು, 2024 – 25ನೇ ಆರ್ಥಿಕ ವರ್ಷದಲ್ಲಿ ₹ 4.84 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಭಗೀರಥ ಜಿ.ಹೇಳಿದರು.

ಸಂಘದ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮೃತಪಟ್ಟಿರುವ ಸಾಲಗಾರ ಸದಸ್ಯರ ಹಾಗೂ ಸಂಕಷ್ಟಕೊಳಗಾದ ಕುಟುಂಬಕ್ಕೆ ಸ್ಪಂದಿಸಿ ಶ್ರೀಗುರು ಸಾಲಗಾರರ ಮರಣ ನಿಧಿಯಿಂದ 82 ಮಂದಿಗೆ ₹61.23 ಲಕ್ಷ ಮೊತ್ತದ ನಿಧಿ ನೀಡಿ ಅವರನ್ನು ಋಣಮುಕ್ತಗೊಳಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶ್ರೀಗುರುದೇವ ಪದವಿ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಸಂಘದ ವತಿಯಿಂದ ಭರಿಸಲಾಗಿದ್ದು, ಬಲ್ಯೊಟ್ಟು ಶ್ರೀಗುರಕೃಪಾ ಎಜುಕೇಷನ್ ಟ್ರಸ್ಟ್‌ಗೆ ₹ 2 ಲಕ್ಷ ವಿದ್ಯಾನಿಧಿ ನೀಡಲಾಗಿದೆ. ಈ ಯೋಜನೆಯು ನಿರಂತರವಾಗಿ ಮುಂದುವರಿಯಲಿದೆ’ ಎಂದರು.

ADVERTISEMENT

ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ನಿರ್ದೇಶಕರಾದ ಸುಜಿತಾ ವಿ.ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ.ದಿವಾಕರ್, ಚಂದ್ರಶೇಖರ್, ಧರಣೇಂದ್ರ ಕುಮಾರ್, ಧರ್ಣಪ್ಪ ಪೂಜಾರಿ, ಆನಂದ ಪೂಜಾರಿ ಕೆ., ಜಯವಿಕ್ರಮ್ ಪಿ., ಚಿದಾನಂದ ಪೂಜಾರಿ ಎಲ್ದಕ್ಕ, ರಕ್ಷಿತ್ ಶಿವರಾಮ್, ಸೂರಜ್ ಕುಮಾರ್ ಭಾಗವಹಿಸಿದ್ದರು.

ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯ ಡಾ.ಸದಾನಂದ ಪೂಜಾರಿ, ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಪ್ರದೀಪ್ ಪೂಜಾರಿ ಅವರನ್ನು ಗೌರವಿಸಲಾಯಿತು

ಅಧ್ಯಕ್ಷರು, ನಿರ್ದೇಶಕರು ಸಭಾ ಭತ್ಯೆಯನ್ನು ವೈದ್ಯಕೀಯ ನೆರವು, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ವಿತರಿಸಿದರು.

ಶಾಖಾವಾರು ಅತಿ ಹೆಚ್ಚು ಸಾಧನೆ ಮಾಡಿದ ಬೆಳ್ತಂಗಡಿ ಶಾಖೆಯ ಸಿಬ್ಬಂದಿಯನ್ನು, ಅತಿ ಹೆಚ್ಚು ಠೇವಣಿ ಸಂಗ್ರಹಿಸಿದ ಪಡೀಲು ಶಾಖಾ ಸಿಬ್ಬಂದಿ, ಹೆಚ್ಚು ಲಾಭ ಗಳಿಸಿದ ಪುರುಷರಕಟ್ಟೆ ಹಾಗೂ ಕಡಬ ಶಾಖಾ ಸಿಬ್ಬಂದಿ, ಹೆಚ್ಚು ಚಿನ್ನಾಭರಣ ಸಾಲ ನೀಡಿದ ಹಳೆಯಂಗಡಿ, ಉಪ್ಪಿನಂಗಡಿ ಶಾಖೆ ಸಿಬ್ಬಂದಿ, ಕಡಿಮೆ ಖರ್ಚು ಮಾಡಿದ ಕಲ್ಲಡ್ಕ ಶಾಖಾ ಸಿಬ್ಬಂದಿ, ಶೀಘ್ರ ಬೆಳವಣಿಗೆ ಸಾಧಿಸಿದ ಕುಂಬ್ರ ಹೊಸ ಶಾಖೆ ಸಿಬ್ಬಂದಿಯನ್ನು ಗೌರವಿಸಲಾಯಿತು.

ಅತಿ ಹೆಚ್ಚು ಠೇವಣಿ ಸಂಗ್ರಹಿಸಿದ ಶಶಿಧರ ಪೂಜಾರಿ, ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು.

ಸಂಘದ ನಿರ್ದೇಶಕ ಗಂಗಾಧರ ಮಿತ್ತಮಾರು ಸ್ವಾಗತಿಸಿದರು. ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಕಾರ್ಯಕಲಾಪ ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಸನ್ಮಾನಿತರ ವಿವರ ನೀಡಿದರು. ನಿರ್ದೇಶಕ ಡಾ.ರಾಜರಾಮ್ ಕೆ.ಬಿ. ವಂದಿಸಿದರು

ಬಳಿಕ ರವಿಚಂದ್ರ ಕನ್ನಡಿಕಟ್ಟೆ ಸಾರಥ್ಯದಲ್ಲಿ ಯಕ್ಷಗಾನ ಗಾನ ಹಾಸ್ಯ ವೈಭವ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.