ಮಂಗಳೂರು: ಇಲ್ಲಿಗೆ ಸಮೀಪದ ಬೈಕಂಪಾಡಿ ಕೈಗಾರಿಕಾ ಪ್ರದೇಶದದಲ್ಲಿ ಕೋಳಿ ಮಾಂಸದ ತ್ಯಾಜ್ಯದಿಂದ ಪ್ರಾಣಿಗಳಿಗೆ ಆಹಾರ ತಯಾರಿಸುವ ‘ಷಿಯಾರ್ ಎಂಟರ್ಪ್ರೈಸಸ್’ ಘಟಕವು ಗುರುವಾರ ಬೆಂಕಿಗಾಹುತಿಯಾಯಿತು.
ಅಗ್ನಿಶಾಮಕ ಇಲಾಖೆ ಹಾಗೂ ಸಮೀಪದ ವಿವಿಧ ಕೈಗಾರಿಕೆಗಳ ಅಗ್ನಿಶಾಮಕ ವಾಹನಗಳು ಸತತ ನಾಲ್ಕೂ ಗಂಟೆಗೂ ಹೆಚ್ಚು ಸಮಯದ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದವು. ಈ ಘಟಕದಲ್ಲಿದ್ದ ಪಶು ಆಹಾರದ ಪೊಟ್ಟಣಗಳು ಬೆಂಕಿಗಾಹುತಿಯಾಗಿವೆ. ಘಟಕವು ಸಂಪೂರ್ಣ ಸುಟ್ಟುಹೋಗಿದೆ.
‘ಬೈಕಂಪಾಡಿಯಲ್ಲಿರುವ ಷಿಯಾರ್ ಎಂಟರ್ಪ್ರೈಸಸ್ಗೆ ಬೆಂಕಿ ಬಿದ್ದ ಬಗ್ಗೆ ಮುಂಜಾನೆ 5.15ಕ್ಕೆ ಮಾಹಿತಿ ಬಂದಿತ್ತು. ತಕ್ಷಣವೇ ಪಾಂಡೇಶ್ವರ ಹಾಗೂ ಕದ್ರಿ ಘಟಕಗಳ ತಲಾ ಒಂದು ಅಗ್ನಿಶಾಮಕ ವಾಹನ ಸ್ಥಳಕ್ಕೆ ತೆರಳಿವೆ. ಬೆಂಕಿಯ ತೀವ್ರತೆ ಜಾಸ್ತಿ ಇದ್ದುದರಿಂದ ಎಂಆರ್ಪಿಎಲ್, ಎಚ್ಪಿಸಿಎಲ್, ಒಎನ್ಜಿಸಿಯ ತಲಾ ಒಂದು ಅಗ್ನಿಶಾಮಕ ವಾಹನಗಳನ್ನು ಹಾಗೂ ನವಮಂಗಳೂರು ಬಂದರು ಪ್ರಾಧಿಕಾರದ ಎರಡು ಅಗ್ನಿಶಾಮಕ ವಾಹನಗಳನ್ನು ತರಿಸಿ ಬೆಂಕಿ ನಂದಿಸಿದ್ದೇವೆ. ಬೆಂಕಿ ಅವಘಡ ಸಂಭವಿಸಿದ ಕಟ್ಟಡದ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ತಗಲುವುದನ್ನು ತಪ್ಪಿಸಿದ್ದೇವೆ’ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಂಗನಾಥ ಸಿ.ಆರ್. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಷಿಯಾರ್ ಎಂಟರ್ಪ್ರೈಸಸ್ ಗೋದಾಮು 150x60 ಅಡಿಗಳಷ್ಟು ವಿಸ್ತೀರ್ಣದ್ದಾಗಿತ್ತು. ಅದರಲ್ಲಿ ಕೋಳಿ ಮಾಂಸದ ತ್ಯಾಜ್ಯವನ್ನು ಬಳಸಿ ತಯಾರಿಸಿದ್ದ ಆಹಾರದ ಪೊಟ್ಟಣಗಳಿದ್ದವು. ಅವೆಲ್ಲವೂ ಬೆಂಕಿಗಾಹುತಿಯಾಗಿವೆ. ಇದರಿಂದ ₹1 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ’ ಎಂದು ಸಂಸ್ಥೆಯ ಮಾಲೀಕ, ಉಳ್ಳಾಲದ ಮೊಹಮ್ಮದ್ ಸಮೀರ್ ತಿಳಿಸಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.