ADVERTISEMENT

ಕ್ರಿಸ್‌ಮಸ್‌ ಸಂಭ್ರಮದಲ್ಲಿ ದೇವಾಲಯಕ್ಕೆ ಸೌಹಾರ್ದ ಭೇಟಿ ನೀಡಿದ ಬಿಷಪ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 8:19 IST
Last Updated 25 ಡಿಸೆಂಬರ್ 2018, 8:19 IST
   

ಮಂಗಳೂರು: ಕ್ರಿಸ್‌ಮಸ್‌ ಸಂಭ್ರಮದ ನಡುವೆಯೇ ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಅವರು ನಗರದ ಉಳ್ಳಾಲ ವ್ಯಾಪ್ತಿಯ ಪೆರ್ಮನ್ನೂರು ವಿಠೋಬ ರುಕುಮಾಯಿ ದೇವಸ್ಥಾನಕ್ಕೆ ಮಂಗಳವಾರ ಸೌಹಾರ್ದ ಭೇಟಿ ನೀಡಿದರು.

ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಮಂಗಳೂರು ಬಿಷಪ್ ಡಾ| ಪೀಟರ್ ಪೌಲ್ ಸಲ್ದಾನ್ಹ, ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಚರ್ಚ್ ಆಡಳಿತ ಮಂಡಳಿ ಸದಸ್ಯರು, ಚರ್ಚಿನ ಹತ್ತಿರದಲ್ಲೇ ಇರುವ ವಿಠೋಬ ರುಕುಮಾಯಿ ಭಜನಾ ಮಂಡಳಿ ವಾರ್ಷಿಕೋತ್ಸವ ಸಮಾರಂಭಕ್ಕೆ ಭೇಟಿ ನೀಡಿ, ಕ್ರಿಸ್‌ಮಸ್ ಹಬ್ಬದ ಸಿಹಿತಿಂಡಿಗಳನ್ನು ಹಂಚಿಕೊಂಡರು.

ಇದೇ ಸಂದರ್ಭ ಮಾತನಾಡಿದ ಬಿಷಪ್ ಪೌಲ್ ಸಲ್ದಾನ್ಹ, 'ಮಂದಿರದ ವಾರ್ಷಿಕೋತ್ಸವ ಸಮಾರಂಭದ ಶುಭಾಷಯಗಳನ್ನು ಸಲ್ಲಿಸಿದರು. ಕ್ರಿಸ್‌ಮಸ್ ಹಬ್ಬದ ಮತ್ತು ಮಂದಿರದ ವಾರ್ಷಿಕೋತ್ಸವ ಆಚರಣೆ ಮೂಲಕ ಎಲ್ಲರಿಗೂ ದೇವರ ಆಶೀರ್ವಾದ ದೊರೆಯಲಿ. ಕುಟುಂಬಗಳು ಸಂತಸದಿಂದ ಬಾಳಲಿ’ಎಂದು ಹಾರೈಸಿದರು.

ADVERTISEMENT

ಸಚಿವ ಯು.ಟಿ.ಖಾದರ್ , ‘ಬಿಷಪ್ ಅವರ ಸೌಹಾರ್ದ ಭೇಟಿಯಿಂದಾಗಿ ಪ್ರೀತಿ ವಿಶ್ವಾಸ ಹಂಚುವ ಅವಕಾಶವಾಗಿದೆ. ಕ್ರಿಸ್‌ಮಸ್ ಹಬ್ಬ ಎಲ್ಲರೂ ಸೇರಿಸಿಕೊಂಡು ಆಚರಿಸುವಂತಹ ಹಬ್ಬವಾಗಿದೆ. ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ದೊರೆಯಲಿ’ ಎಂದರು. ದೇವಸ್ಥಾನದ ಸರ್ವ ಸಮಿತಿಯವರನ್ನು ಅಭಿನಂದಿಸಿದರು.

ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಸಂಭ್ರಮದ ಕ್ರಿಸ್ ಮಸ್ ಹಬ್ಬದ ಆಚರಣೆ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಂಗಳೂರು ಬಿಷಪ್ ಫಾ. ಪೀಟರ್ ಪೌಲ್ ಸಲ್ದಾನ್ಹ ಭಾಗವಹಿಸಿದರು. ಚರ್ಚ್ ಧರ್ಮಗುರು ಫಾ. ಜೆಬಿ ಸಲ್ದಾನ್ಹ ಜೊತೆಗಿದ್ದರು.

ಇದೇ ಸಂದರ್ಭ ಕಾಂಗ್ರೆಸ್ ಮುಖಂಡರುಗಳಾದ ಸುರೇಶ್ ಭಟ್ನಗರ, ಬಾಝಿಲ್ ಡಿಸೋಜ, ಮಂದಿರದ ಅಧ್ಯಕ್ಷ ಪದ್ಮನಾಭ, ಮೋಹನ್ ಬಂಗೇರ, ಚೇತನ್ ಕುಮಾರ್ ಶೆಟ್ಟಿ, ಸಚ್ಚೀಂದ್ರ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.