ADVERTISEMENT

ಮಂಗಳೂರು: 12 ಜನರ ಪಾದ ತೊಳೆದ ಬಿಷಪ್‌

ಕರಾವಳಿಯಲ್ಲಿ ಪವಿತ್ರ ಗುರುವಾರ: ವಿಶೇಷ ಬಲಿಪೂಜೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 16:00 IST
Last Updated 14 ಏಪ್ರಿಲ್ 2022, 16:00 IST
ಕಾಸರಗೋಡು ಜಿಲ್ಲೆಯ ಮಣಿಯಂಪಾರೆ ಚರ್ಚ್‌ನಲ್ಲಿ ಗುರುವಾರ ಸಂಜೆ ಮಂಗಳೂರು ಬಿಷಪ್‌ ರೆ.ಡಾ.ಪೀಟರ್‌ ಪಾವ್ಲ್‌ ಸಲ್ಡಾನ, 12 ಜನರ ಪಾದ ತೊಳೆದರು.
ಕಾಸರಗೋಡು ಜಿಲ್ಲೆಯ ಮಣಿಯಂಪಾರೆ ಚರ್ಚ್‌ನಲ್ಲಿ ಗುರುವಾರ ಸಂಜೆ ಮಂಗಳೂರು ಬಿಷಪ್‌ ರೆ.ಡಾ.ಪೀಟರ್‌ ಪಾವ್ಲ್‌ ಸಲ್ಡಾನ, 12 ಜನರ ಪಾದ ತೊಳೆದರು.   

ಮಂಗಳೂರು: ಕ್ರಿಶ್ಚಿಯನ್‌ರು ಪವಿತ್ರ ಗುರುವಾರವನ್ನು ಆಚರಿಸಿ, ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಸ್ಮರಿಸಿದರು. ಚರ್ಚ್‌ಗಳು ಮತ್ತು ಇತರ ಪ್ರಾರ್ಥನ ಮಂದಿರಗಳಲ್ಲಿ ಗುರುವಾರ ಸಂಜೆ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆಗಳು ನಡೆದವು.

ಕಾಸರಗೋಡು ಜಿಲ್ಲೆಯ ಮಣಿಯಂಪಾರೆ ಚರ್ಚ್‌ನಲ್ಲಿ ಮಂಗಳೂರು ಬಿಷಪ್‌ ರೆ.ಡಾ.ಪೀಟರ್‌ ಪಾವ್ಲ್‌ ಸಲ್ಡಾನ, ಬಲಿಪೂಜೆ ಮತ್ತು ಪರಮ ಪ್ರಸಾದದ ಮೆರವಣಿಗೆ ನೇತೃತ್ವ ವಹಿಸಿದ್ದರು. ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನದ ಸಂದರ್ಭದಲ್ಲಿ 12 ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ್ದು, ಅದರ ಸಂಕೇತವಾಗಿ ಬಿಷಪರು ಮತ್ತು ಇತರ ಚರ್ಚ್‌ಗಳಲ್ಲಿ ಸ್ಥಳೀಯ ಧರ್ಮಗುರುಗಳು, 12 ಕ್ರೈಸ್ತರ ಪಾದಗಳನ್ನು ತೊಳೆದರು.

ಸಂದೇಶ ನೀಡಿದ ಬಿಷಪ್‌ ಪೀಟರ್‌ ಪಾವ್ಲ್‌ ಸಲ್ಡಾನ, ‘ಪವಿತ್ರ ಗುರುವಾರ ಎಂಬುದು ಮೂರು ವಿಷಯಗಳಿಗೆ ಪ್ರಾಮುಖ್ಯ ಇದೆ. ಯೇಸು ಕ್ರಿಸ್ತರು ಪರಮ ಪ್ರಸಾದದ ಸಂಸ್ಕಾರವನ್ನು ಈ ದಿನದಂದು ಆರಂಭಿಸಿದರು. ಅದನ್ನು ಮತ್ತೆ ನಡೆಸುವಂತೆ ಸೂಚಿಸಿದರು. ಅದರ ಪ್ರಕಾರ ಪ್ರತಿ ಪವಿತ್ರ ಬಲಿಪೂಜೆಯಲ್ಲಿ ಇದನ್ನು ನಡೆಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ನಗರದ ರೊಸಾರಿಯೊ ಚರ್ಚ್‌, ಪಾಲ್ದನೆ ಸಂತ ತೆರೆಜಾ ಚರ್ಚ್‌ನಲ್ಲಿ ಪವಿತ್ರ ಗುರುವಾರದ ಬಲಿಪೂಜೆಯನ್ನು ಆಚರಿಸಲಾಯಿತು. ಬಲಿಪೂಜೆಯಲ್ಲಿ ಭಾಗವಹಿಸಿದ ಧರ್ಮಗುರುಗಳು ಚರ್ಚ್‌ನಿಂದ ಆಯ್ಕೆ ಮಾಡಿದ 12 ಜನರ ಪಾದಗಳನ್ನು ತೊಳೆದರು.

‘ಏಸುಕ್ರಿಸ್ತರು ತಮ್ಮ ಜೀವನದುದ್ದಕ್ಕೂ ಪರರ ಸೇವೆ ಹಾಗೂ ಕಷ್ಟ ಕಾರ್ಪಣ್ಯದಲ್ಲಿ ಸಿಲುಕಿದ ಜನರನ್ನು ಸಂತೈಸಿ, ಮನುಕುಲದ ಸೇವೆಯೇ ಶ್ರೇಷ್ಠಯನ್ನು ತೋರಿಸಿಕೊಟ್ಟರು. ನಾವು ನಮ್ಮ ಸುತ್ತಮುತ್ತಲಿನ ಜನರ ಸೇವೆಗೆ ಹೆಚ್ಚು ಮಹತ್ವ ನೀಡಬೇಕು’ ಎಂದು ಧರ್ಮಗುರುಗಳು ಹೇಳಿದರು.

ಶುಭ ಶುಕ್ರವಾರದ ಅಂಗವಾಗಿ ಏ.15ರಂದು ನಗರದ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆಗಳು ನಡೆಯಲಿವೆ. ಕ್ರಿಶ್ಚಿಯನ್‌ರು ಗುರುವಾರ ಸಂಜೆಯಿಂದಲೇ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಣೆಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.