ಮೂಡುಬಿದಿರೆ: ಇಲ್ಲಿನ ಪುರಸಭೆ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ‘ಪ್ಲಾಸ್ಟಿಕ್ ಚೀಲ ಬೇಡ ಅನ್ನಿ; ಬಟ್ಟೆ ಚೀಲ ನೀವು ತನ್ನಿ’ ಅಭಿಯಾನವು ಶುಕ್ರವಾರ ಮೂಡುಬಿದಿರೆಯ ಸಂತೆ ಮಾರುಕಟ್ಟೆಯಲ್ಲಿ ನಡೆಯಿತು.
ಪುರಸಭೆ ಪರಿಸರ ಎಂಜಿನಿಯರ್ ಶಿಲ್ಪಾ ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್ನಿಂದ ಕಸ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಅಭಿಯಾನವನ್ನು ಕೈಗೊಳ್ಳಲಾಗಿದೆ. ಮಾರುಕಟ್ಟೆಗೆ ಬರುವ ಗ್ರಾಹಕರು ಚೀಲವನ್ನು ತರದೆ ಪ್ಲಾಸ್ಟಿಕ್ ಚೀಲವನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂಥವರಲ್ಲಿ ಬಟ್ಟೆ ಚೀಲಗಳನ್ನು ಬಳಸುವಂತೆ ಪ್ರೇರೇಪಿಸಲಾಗುತ್ತಿದ್ದು, ಎರಡು ಬಟ್ಟೆ ಚೀಲಗಳಿಗೆ ₹5 ಬೆಲೆ ಇದೆ ಎಂದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಪಿ.ಕೆ.ಥಾಮಸ್, ರೋಟರಿ ಕ್ಲಬ್ ಅಧ್ಯಕ್ಷ ರವಿ ಪ್ರಸಾದ್ ಉಪಾಧ್ಯಾಯ, ಸದಸ್ಯ ಸಿ.ಎಚ್.ಗಫೂರ್, ಮಹಮ್ಮದ್ ಆರಿಫ್, ಜಯರಾಮ್ ಕೋಟ್ಯಾನ್, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಸ್ವಚ್ಛತಾ ರಾಯಭಾರಿ ಸಂಧ್ಯಾ ಭಟ್ ಭಾಗವಹಿಸಿದ್ದರು.
ಆಳ್ವಾಸ್ ಕಾಲೇಜಿನ ಬಿಎಸ್ಡಬ್ಲ್ಯು, ಎಂಎಸ್ಡಬ್ಲ್ಯು, ಪತ್ರಿಕೋದ್ಯಮದ ವಿಭಾಗ ಮತ್ತು ವಾಮದಪದವು ಪದವಿ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಜಾಗೃತಿ ಮೂಡಿಸಿದರು. ದೇಣಿಗೆ ಪೆಟ್ಟಿಗೆ ಮೂಲಕ ಬಟ್ಟೆ ಚೀಲಕ್ಕಾಗಿ ದೇಣಿಗೆ ಸಂಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.