ಮಂಗಳೂರು: ಕಂಬಳದ ಕೋಣಗಳ ಯಜಮಾನ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ (78) ಗುರುಪುರ ಸೇತುವೆ ಬಳಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ನಿಧನರಾದರು.
ಅವರು ದ್ವಿಚಕ್ರ ವಾಹನದಲ್ಲಿ ಡೇರಿಗೆ ಹಾಲು ಕೊಡಲು ಹೋಗುತ್ತಿದ್ದ ವೇಳೆ, ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅವರಿಗೆ ಮೂವರು ಪುತ್ರರು, ಪುತ್ರಿ ಇದ್ದಾರೆ.
ಕಂಬಳ ಕ್ಷೇತ್ರದಲ್ಲಿ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ ಹೆಸರು ಚಿರಪರಿಚಿತ. ನಾಲ್ಕೂವರೆ ದಶಕಗಳಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು, ಬಾಲ್ಯದಿಂದಲೇ ಕಂಬಳದಲ್ಲಿ ಆಸಕ್ತಿ ಹೊಂದಿದ್ದರು. ತಮ್ಮ ಗದ್ದೆ ಉಳಲೆಂದು ಉತ್ತಮ ಜಾತಿಯ ಕೋಣಗಳನ್ನು ತಂದು, ಕೃಷಿ ಕೆಲಸ ಮುಗಿದ ಬಳಿಕ ಕಂಬಳ ಗದ್ದೆಗಳಲ್ಲಿ ಓಡಿಸಿ ಖುಷಿ ಪಡುತ್ತಿದ್ದರು. ಮುಂದೆ, ಕಂಬಳಕ್ಕಾಗಿಯೇ ಹುಬ್ಬಳ್ಳಿ, ಕೋಟ ಮೊದಲಾದ ಕಡೆಗಳಿಂದ ಉತ್ತಮ ಜಾತಿಯ ಕೋಣಗಳನ್ನು ತಂದು, ಪಳಗಿಸುತ್ತಿದ್ದರು.
ಬಾರಾಡಿ ಕಂಬಳದಲ್ಲಿ ಪ್ರಥಮ ಬಾರಿಗೆ ಅವರನ್ನು ಗುರುತಿಸಲಾಗಿತ್ತು. ಆರಂಭದ ದಿನಗಳಲ್ಲಿ ಕೋಣ ಓಡಿಸುತ್ತಿದ್ದ ಅವರು, ನಂತರ ಜೋಡಿ ಕೋಣಗಳನ್ನು ಸಾಕಿ, ಅವುಗಳನ್ನು ಕಂಬಳಕ್ಕೆ ಕೊಂಡೊಯ್ಯುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಎಲ್ಲ ಕಂಬಳಗಳಲ್ಲಿ ಕೋಣ ಇಳಿಸಿದ ಅವರಿಗೆ ಬಹುತೇಕ ಕಡೆಗಳಲ್ಲಿ ಬಹುಮಾನ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.