ಮಂಗಳೂರು: ನಗರವೂ ಸೇರಿದಂತೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಇದೇ 30 ಮತ್ತು 31 ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಕೇರಳದ 456 ವಿದ್ಯಾರ್ಥಿಗಳು ಹಾಜರಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 12 ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ತಲಪಾಡಿಯಿಂದ ನಗರದ ಪರೀಕ್ಷಾ ಕೇಂದ್ರಗಳಿಗೆ ಬರುವ 400 ವಿದ್ಯಾರ್ಥಿಗಳಿಗೆ 9, ವಿಟ್ಲ ಗಡಿಭಾಗದ ಸಾರಡ್ಕದಿಂದ ಪುತ್ತೂರಿನ ಪರೀಕ್ಷಾ ಕೇಂದ್ರಗಳಿಗೆ ಬರುವ 45 ವಿದ್ಯಾರ್ಥಿಗಳಿಗೆ ಎರಡು ಹಗೂ ಸುಳ್ಯ ಗಡಿಭಾಗದ ಪಂಜಿಲ್ಲುವಿನಿಂದ ಸುಳ್ಯದ ಪರೀಕ್ಷಾ ಕೇಂದ್ರಕ್ಕೆ ಬರುವ 11 ವಿದ್ಯಾರ್ಥಿಗಳಿಗೆ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಇ–ಪಾಸ್ ಅಗತ್ಯವಿಲ್ಲ. ಪ್ರವೇಶ ಪತ್ರವನ್ನು ತೋರಿಸಿ, ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಬಸ್ಗಳಲ್ಲಿಯೇ ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕು. ಬೆಳಿಗ್ಗೆ 7.30ರೊಳಗಾಗಿ ಗಡಿ ಭಾಗದಲ್ಲಿ ಹಾಜರಿರಬೇಕು.
ಆಗಸ್ಟ್ 1 ರಂದು ಹೊರನಾಡು ಹಾಗೂ ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ. ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಪರೀಕ್ಷೆಯನ್ನು ಕೋವಿಡ್–19 ಕಾರಣದಿಂದ ಈ ವರ್ಷ ನಗರದ ರಾಮಕೃಷ್ಣ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗುತ್ತಿದೆ. ಈ ಪರೀಕ್ಷೆಗೆ 360 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.