ಮಂಗಳೂರು: ಟೋಲ್ಗೇಟ್ಗಳಲ್ಲಿ ದರ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ಖಾಸಗಿ ಬಸ್ ಮಾಲೀಕರು ಬಸ್ ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡುವಂತೆ ಇಲ್ಲ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದರು.
ಬಸ್ ದರ ಏರಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲು ಸಾರಿಗೆ ಪ್ರಾಧಿಕಾರದ ಸಭೆಯನ್ನು ಶೀಘ್ರವೇ ಕರೆಯಲಾಗುವುದು ಎಂದರು.
ಕೆಇಟಿ ಆದೇಶದಂತೆ ಕ್ರಮ: ಮಂಗಳೂರು ಉಪ ವಿಭಾಗಾಧಿಕಾರಿ ವರ್ಗಾವಣೆ ವಿಚಾರವನ್ನು ಕೆಇಟಿ ಆದೇಶದ ಪ್ರಕಾರ ಕಾರ್ಯಗತಗೊಳಿಸಲಾಗುವುದು. ರವಿಚಂದ್ರ ನಾಯಕ್ ಅವರು ವರ್ಗಾವಣೆ ಪ್ರಶ್ನಿಸಿ ಕೆಇಟಿಯಿಂದ ತಡೆಯಾಜ್ಞೆ ತಂದಿದ್ದಾರೆ. ಅವರು ಮರಳಿ ಅಧಿಕಾರ ಸ್ವೀಕರಿಸಬೇಕಾದರೆ, ಕೆಇಟಿ ಮತ್ತೆ ಆದೇಶ ಹೊರಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸ್ಪಷ್ಟಪಡಿಸಿದರು.
ಕೆಇಟಿ ವರ್ಗಾವಣೆಗೆ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರು ಉಪ ವಿಭಾಗಾಧಿಕಾರಿ ಕಚೇರಿಗೆ ಬಂದು, ಮರಳಿ ಅಧಿಕಾರ ಸ್ವೀಕರಿಸಲು ಮುಂದಾಗಿದ್ದರು. ಆದರೆ ಹಾಲಿ ಉಪ ವಿಭಾಗಾಧಿಕಾರಿ ಅವರು ಆದೇಶ ಇಲ್ಲದ ಕಾರಣಕ್ಕೆ ಅಧಿಕಾರ ಹಸ್ತಾಂತರಿಸಿರಲಿಲ್ಲ ಎಂದು ತಿಳಿಸಿದರು.
ತಿಂಗಳ ಆರಂಭದಲ್ಲೇ ಪಡಿತರ: ಪಡಿತರ ಚೀಟಿದಾರರಿಗೆ ಪಡಿತರವನ್ನು ತಿಂಗಳ ಕೊನೆಯ ಬದಲು ಆರಂಭದಿಂದಲೇ ನೀಡಬೇಕು. ಪಡಿತರ ಹಂಚಿಕೆಗೆ ಆನ್ಲೈನ್ ವ್ಯವಸ್ಥೆ ಕೈಕೊಟ್ಟರೆ, ಕೈಬರಹ ಮೂಲಕ ಹಳೆ ವಿಧಾನದಲ್ಲಿ ನೀಡುವ ಕುರಿತಂತೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.