ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಸೋಮವಾರ ಬಂದಿಳಿದ ಪ್ರಯಾಣಿಕರು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಭಾಗಕ್ಕೆ ತೆರಳಲು ಬಸ್ ಸಿಗದೆ ಪರದಾಡಿದರು.
ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲು ಮೂಲಕ ಬೆಳಿಗ್ಗೆ 8 ಗಂಟೆ ಸುಮಾರಿಗೆ ನಿಲ್ದಾಣಕ್ಕೆ ಬಂದಿದ್ದರು. ಬಸ್ಗಾಗಿ 10 ಗಂಟೆವರೆಗೂ ಕಾಯ್ದು, ಬಸವಳಿದು ರಸ್ತೆ ಬದಿಯಲ್ಲೇ ಕುಳಿತಿದ್ದರು.
‘ನಾನು ಹುಬ್ಬಳ್ಳಿಯಿಂದ ರೈಲಿನಲ್ಲಿ ಬಂದು 8 ಗಂಟೆಗೆ ಇಲ್ಲಿ ತಲುಪಿದ್ದೇನೆ. ಧರ್ಮಸ್ಥಳಕ್ಕೆ ಹೋಗುವ ಬಸ್ ಸಿಕ್ಕಿಲ್ಲ. ಕೆಲವು ಬಸ್ಗಳಲ್ಲಿ ಪ್ರಯಾಣಿಕರು ಭರ್ತಿಯಾಗಿದ್ದರಿಂದ ಕಾಲಿಡಲೂ ಸಾಧ್ಯವಾಗಲಿಲ್ಲ’ ಎಂದು ಪ್ರಯಾಣಿಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಮೀಪದ ನೆಟ್ಟಣದ ರೈಲು ನಿಲ್ದಾಣದಿಂದ ಸಾವಿರಾರು ಮಂದಿ ಪ್ರಯಾಣ ಬೆಳೆಸುತ್ತಾರೆ. ರೈಲು ನಿಲ್ದಾಣಕ್ಕೆ ಬಸ್ ಸಂಪರ್ಕ ಇದ್ದರೂ ಕೆಲವು ಸಂದರ್ಭ ಹೆದ್ದಾರಿವರೆಗೆ ಪ್ರಯಾಣಿಕರು ಬರಬೇಕು. ಹೆದ್ದಾರಿ ಬದಿಯಲ್ಲಿ ಬಸ್ ತಂಗುದಾಣ ಇಲ್ಲದೆ ಪ್ರಯಾಣಿಕರು ರಸ್ತೆ ಬದಿ ನಿಲ್ಲುವಂತಾಗಿದೆ. ನೆಟ್ಟಣ ಪೇಟೆಯ ಎರಡೂ ಬದಿ ಸುಸಜ್ಜಿತ ಬಸ್ ತಂದುದಾಣ ನಿರ್ಮಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.