
ಉಜಿರೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಫೋನ್ ಕೇಬಲ್ ಕಳವು ಮಾಡಲಾಗಿದೆ.
ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅಡಗಿಸಿಟ್ಟಿದ್ದ ಕೇಬಲ್ ಅನ್ನು ಕೊಂಡೊಯ್ಯಲಾಗಿದೆ. ಬೇರೆ ಬೇರೆ ಕಡೆಗಳಿಂದ ಕದ್ದು ತಂದ ಕೇಬಲನ್ನು ಉಜಿರೆಯಲ್ಲಿರುವ ನಾಗಬನದ ಮುಂಭಾಗದ ಚರಂಡಿಯಲ್ಲಿ ದಾಸ್ತಾನು ಮಾಡಿದ್ದು, ಅದರ ಮೇಲೆ ಮಣ್ಣು ಮುಚ್ಚಿ ಹಾಕಲಾಗಿತ್ತು. ಅಲ್ಲಿಂದ ಭಾನುವಾರ ತಡರಾತ್ರಿ ಸುಮಾರು ಒಂದು ಕ್ವಿಂಟಲ್ನಷ್ಟು ಕೇಬಲ್ಅನ್ನು ಜೆಸಿಬಿ ಮೂಲಕ ಅಗೆದು ತೆಗೆದು ಕೊಂಡುಹೋದ ದೃಶ್ಯ ಸಮೀಪದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಪ್ರಸ್ತುತ ರಸ್ತೆ ಕಾಮಗಾರಿ ಕೆಲವೊಮ್ಮೆ ತಡರಾತ್ರಿಯೂ ನಡೆಯುತ್ತಿರುವುದರಿಂದ ಹಾಗೂ ಭಾನುವಾರ ರಾತ್ರಿ ಭಾರಿ ಮಳೆಯಾಗುತ್ತಿದ್ದರಿಂದ ಸ್ಥಳೀಯ ಅಂಗಡಿಯಲ್ಲಿ ಮಲಗಿದ್ದವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಜೆಸಿಬಿಯಲ್ಲಿ ಅಗೆಯುವ ವೇಳೆ ಉಜಿರೆ-ಮುಂಡಾಜೆ ಸಂಪರ್ಕದ ಬ್ರಾಡ್ ಬ್ಯಾಂಡ್ ಕೇಬಲ್ ತುಂಡಾಗಿ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದು, ಸೋಮವಾರ ಬೆಳಿಗ್ಗೆ ಬಿಎಸ್ಎನ್ಎಲ್ ಸಿಬ್ಬಂದಿ ಸಮಸ್ಯೆ ಹುಡುಕುವ ವೇಳೆ ಘಟನೆ ಗೊತ್ತಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಬಿಎಸ್ಎನ್ಎಲ್ನ ಜೆಟಿಒ ಆಶಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.