ಪುತ್ತೂರು: ತೋಟಗಾರಿಕಾ ಬೆಳೆಗಳಿಗೆ ನಿಗದಿತ ಸಮಯದಲ್ಲಿ ಪೋಷಕಾಂಶ ನೀಡುವ ಜತೆಗೆ ಅವುಗಳ ಸಮತೋಲನ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮಹತ್ವದ್ದಾಗಿದೆ ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಮಣ್ಣು ಮತ್ತು ಕೃಷಿ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್. ನಾಗರಾಜ ಹೇಳಿದರು.
36ನೇ ಸ್ಥಾಪನಾ ದಿನಾಚರಣೆ ಪ್ರಯುಕ್ತ ಇಲ್ಲಿನ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಶುಕ್ರವಾರ ನಡೆದ ಆನ್ಲೈನ್ ಕಾರ್ಯಕ್ರಮದಲ್ಲಿ ‘ದೀರ್ಘಾವಧಿ ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಆಧುನಿಕ ವಿಜ್ಞಾನದ ಮೂಲಕ ಸಮಾಧಾನ ಕಂಡುಕೊಳ್ಳಬೇಕಾಗಿದೆ ಎಂದರು.
ಗೇರು ಕೃಷಿಕರಾದ ಕಡಮಜಲು ಸುಭಾಷ ರೈ ಮಾತನಾಡಿ, ‘ಗೇರು ಕೃಷಿ ಉಪಬೆಳೆಯಾಗಿ ಕೃಷಿಕರಿಗೆ ಆಧಾರವಾಗಿದೆ. ಹತ್ತಾರು ಜನರಿಗೆ ಉದ್ಯೋಗ ನೀಡಲು ಸಹಕಾರಿಯಾಗಿದೆ. ಗೇರು ಬೆಳೆಯ ವಿಸ್ತರಣೆಯಲ್ಲಿ ಈ ಸಂಸ್ಥೆಯ ಕೊಡುಗೆ ಅಪಾರ’ ಎಂದರು.
ಉದಯ ಕುಮಾರ್ ಮುಳ್ಳೆರಿಯಾ ಅನಿಸಿಕೆ ವ್ಯಕ್ತಪಡಿಸಿದರು. ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಯಲ್ಲಿ ‘ಗೇರು ಹಣ್ಣಿನ ಮೌಲ್ಯವರ್ಧನೆ’ ಕುರಿತ ಪ್ರಬಂಧ ಪ್ರಕಟವಾದ ಕಾರಣಕ್ಕೆ ವಿಜ್ಞಾನಿ ಡಾ. ಪ್ರೀತಿ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ಪ್ರಭಾರ ನಿರ್ದೇಶಕಿ ಡಾ. ಅನಿತಾ ಕರುಣ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಶ್ವತಿ ವಂದಿಸಿದರು. ಸಂಸ್ಥೆಯ ವಿಜ್ಞಾನಿ ಡಾ. ತೋಂಡೈಮನ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.