ಪ್ರಾತಿನಿಧಿಕ ಚಿತ್ರ
ಮಂಗಳೂರು: ಗೋವು ಕಳ್ಳತನ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೂವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೊಕಾ) ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕೆ ತಿಳಿಸಿದ್ದಾರೆ.
ಆ. 14ರಂದು ತುಂಬೆ ಬಳಿ ಹಸುವೊಂದನ್ನು ಕಳವು ಮಾಡಿ ಕಡಿದ ಆರೋಪದಡಿ ಭಾರತೀಯ ನ್ಯಾಯಸಂಹಿತೆಯ ಕಲಂ 303(2) ಮತ್ತು ಕರ್ನಾಟಕ ಗೋಸಂರಕ್ಷಣಾ ಕಾಯ್ದೆಯ ಕಲಂ 11 (ಡಿ) ಅಡಿಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉಳ್ಳಾಲ ಚೆಂಬುಗುಡ್ಡೆಯ ಇರ್ಷಾದ್ (34), ಕುದ್ರೋಳಿಯ ಮಹಮ್ಮದ್ ಮನ್ಸೂರ್ (48) ಮತ್ತು ಕಣ್ಣೂರಿನ ಅಬ್ದುಲ್ ಅಜೀಂ (18) ಎಂಬವರನ್ನು ಬಂಧಿಸಿದ್ದರು. ಇವರು ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಸು ಕಳವು ಮಾಡಿದ್ದರು.
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ
ಕೈಗೊಳ್ಳಲಾಗುವುದು ಎಂದು ಅರುಣ್ ತಿಳಿಸಿದ್ದಾರೆ.
ಬಂಧನ
ಸುಳ್ಯ: ಅಜ್ಜಾವರದ ಮಹಮ್ಮದ್ ರಫೀಕ್ ಅವರ ಅಂಗಡಿಯ ಗೋದಾಮಿನಿಂದ ಸೆ.12ರಂದು ಅಡಿಕೆ ಕಳವು ಮಾಡಿದ ಸುಳ್ಯ ತಾಲ್ಲೂಕಿನ ಮಂಡೆಕೋಲು ಗ್ರಾಮದ ಸುಪ್ರೀತ್
(22) ಮತ್ತು ಜಾಲ್ಸೂರಿನ ಮಹಮ್ಮದ್ ಸಿನಾನ್ (21) ಎಂಬವರನ್ನು ಮಂಡೆಕೋಲು ಬಳಿಯ ಮೂರೂರು ಚೆಕ್ ಪೋಸ್ಟ್ ಬಳಿ ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಒಂದು ಕ್ವಿಂಟಾಲ್ ಅಡಿಕೆಯನ್ನು ಸಾಗಿಸಲು ಬಳಸಿದ ಆಟೊವನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.