ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಚರ್ಚ್‌ಗಳ ಅಭಿವೃದ್ಧಿ

ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆನೆಡಿ ಶಾಂತಕುಮಾರ್ ವಿವರಣೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 5:13 IST
Last Updated 25 ನವೆಂಬರ್ 2022, 5:13 IST
ಪತ್ರಿಕಾಗೋಷ್ಠಿಯಲ್ಲಿ ಕೆನೆಡಿ ಶಾಂತಕುಮಾರ್ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಕೆನೆಡಿ ಶಾಂತಕುಮಾರ್ ಮಾತನಾಡಿದರು   

ಮಂಗಳೂರು: ಕ್ರೈಸ್ತ ಸಮುದಾಯದವರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಚರ್ಚ್‌ಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ (ಸಿಡಿಸಿ) ಅಧ್ಯಕ್ಷ ಜೆ. ಕೆನೆಡಿ ಶಾಂತಕುಮಾರ್ ತಿಳಿಸಿದರು.

‘ಕ್ರೈಸ್ತರ ಅಭಿವೃದ್ಧಿ ಕಾರ್ಯಗಳಿಗಾಗಿ ₹ 50 ಕೋಟಿ ಬಿಡುಗಡೆ ಮಾಡಲಾಗಿದೆ. ಇದರ ಸದ್ಬಳಕೆ ಆಗುತ್ತಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡಿದ್ಧೇನೆ. ಸ್ಮಶಾನಗಳ ಗೋಡೆ ನಿರ್ಮಾಣ, ಚರ್ಚ್‌ ಕಟ್ಟಡ ಅಭಿವೃದ್ಧಿ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ಇದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಚರ್ಚ್‌ಗಳ ಸ್ಮಶಾನ ಗೋಡೆ ನಿರ್ಮಾಣ ಮತ್ತು 2 ಸಮುದಾಯ ಭವನ ನಿರ್ಮಾಣಕ್ಕೆ ಕೂಡ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಂಟ್ವಾಳದ ಪೆರುವಾಯಿ ಚರ್ಚ್ ಮತ್ತು ಮಂಗಳೂರು ತಾಲ್ಲೂಕಿನ ವಾಮಂಜೂರು ಚರ್ಚ್‌ ಆವರಣದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

‘ವಿದೇಶದಲ್ಲಿ ಕಲಿಯುವ ವಿದ್ಯಾರ್ಥಿಗಳಿಗಾಗಿ ₹ 20 ಲಕ್ಷ ನೀಡುವ ಯೋಜನೆಗೆ ಸರ್ಕಾರ ಮರುಚಾಲನೆ ನೀಡಿದೆ’ ಎಂದ ಅವರು ‘ಕ್ರೈಸ್ತರನ್ನು ಓಟ್‌ ಬ್ಯಾಂಕ್ ರಾಜಕೀಯದ ದಾಳಗಳಾಗಿ ಬಳಸಲು ಬಿಜೆಪಿ ಬಯಸುವುದಿಲ್ಲ. ಸಮುದಾಯದ ಅಭಿವೃದ್ಧಿ ಗುರಿಯಾಗಿರಿಸಿಕೊಂಡು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಧನಾತ್ಮಕ ಜಾತ್ಯತೀತ ವಾದವನ್ನು ಪಕ್ಷ ಪ್ರತಿಪಾದಿಸುತ್ತಿದೆ’ ಎಂದು ಅಭೀಪ್ರಾಯಪಟ್ಟರು.

ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜೋಯೆಲ್ ಮೆಂಡೋನ್ಸ, ಮುಖಂಡರಾದ ಸಂದೀಪ್ ಬಾಬು, ಶಮಿತ್‌, ಅಜಿತ್ ಡಿ ಸಿಲ್ವ ಮತ್ತು ಮಾರ್ಟಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.