ADVERTISEMENT

ಏನ್ರೀ ಶೆಟ್ರೇ ಇಲ್ಲೇ ಹೋಟೆಲ್‌ ಮಾಡಲಿಕ್ಕಾಗಲ್ವ: ಸಿಎಂ ಸಿದ್ದರಾಮಯ್ಯ

‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ‌ ಸಮಾವೇಶದಲ್ಲಿ ಸಿಎಂ ಲಹರಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:13 IST
Last Updated 11 ಜನವರಿ 2026, 6:13 IST
<div class="paragraphs"><p>ಮಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಯಮಿ ಎ.ಜೆ.ಶೆಟ್ಟಿ ಅವರಿಗೆ ಒಪ್ಪಂದ ಪತ್ರ ಹಸ್ತಾಂತರಿಸಿದರು. </p></div>

ಮಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಯಮಿ ಎ.ಜೆ.ಶೆಟ್ಟಿ ಅವರಿಗೆ ಒಪ್ಪಂದ ಪತ್ರ ಹಸ್ತಾಂತರಿಸಿದರು.

   

ಮಂಗಳೂರು: ಇಷ್ಟೆಲ್ಲಾ ಅಭಿವೃದ್ಧಿ ಆದರೂ ಮಂಗಳೂರಿನಲ್ಲಿ ಒಂದೇ ಒಂದು ಪಂಚತಾರಾ ಹೋಟೆಲ್‌ ಇಲ್ಲ... ಏನ್ರಿ  ಪ್ರವೀಣ್ ಶೆಟ್ರೇ..., ಸಯ್ಯದ್ ಬ್ಯಾರಿಯವರೇ... ವಿದೇಶದಲ್ಲೆಲ್ಲಾ ಹೋಟೆಲ್ ಉದ್ಯಮ ನಡೆಸುತ್ತೀರಿ. ಇಲ್ಲೇ‌ ಮಾಡಬಹುದಲ್ಲಪ್ಪಾ... ಇಲ್ಲಿ ಮಾಡ ಬೇಡಿ ಎಂದು ಹೇಳಿದ್ರಾ ಯಾರಾದ್ರೂ...

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ‌ ಸಮಾವೇಶ‘ದಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಉದ್ಯಮಿಗಳನ್ನು ಆಪ್ತವಾಗಿ ಮಾತನಾಡಿಸಿದ ಪರಿ ಇದು. 

ADVERTISEMENT

ಪ್ರವಾಸೋದ್ಯಮ ಇಲಾಖೆಯು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತಗಳ ಸಹಯೋಗದಲ್ಲಿ ಇಲ್ಲಿ ಶನಿವಾರ ಏರ್ಪಡಿಸಿದ್ದ ಈ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ  ಅವರು, ‘ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ನೀತಿ ರೂಪಿಸಿ ಜಾರಿಗೆ ತಂದಿದೆ. ‌ಅಭಿವೃದ್ಧಿ ಪಡಿಸಬಹುದಾದ ಅನೇಕ‌ ಪ್ರವಾಸಿ  ಸ್ಥಳಗಳು ಕರಾವಳಿಯಲ್ಲಿವೆ. ಇದನ್ನೆಲ್ಲ ಬಳಸಿ ಇಲ್ಲೇ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ. ಇದರಿಂದ ಇಲ್ಲಿನವರಿಗೇ ಕೆಲಸ ಸಿಗಲಿದೆ. ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲಿದೆ. ಉತ್ತೇಜನಕ್ಕೆ ಕಾಯದೇ ಸ್ವಯಂಪ್ರೇರಣೆಯಿಂದ ಈ ಕಾರ್ಯಕ್ಕೆ ಮುಂದೆ ಬರಬೇಕು. ಪಂಚತಾರಾ ಹೋಟೆಲ್ ಸ್ಥಾಪಿಸಲೂ ಈಗ ಶೆಟ್ರು ಮುಂದೆ ಬಂದಿದ್ದಾರೆ’ ಎಂದರು. 

‘ಅಭಿವೃದ್ಧಿಗೂ ಕಾನೂನು ಸುವ್ಯವಸ್ಥೆಗೂ ಸಂಬಂಧ ಇದೆ. ಪ್ರವಾಸೋದ್ಯಮ ಬೆಳೆಯಲು ಮುಖ್ಯವಾಗಿ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು. ‌ದ‌ಕ್ಷಿಣ ಜಿಲ್ಲೆಯಲ್ಲಿ ಶಾಂತಿ ವಾತಾವರಣ ನೆಲೆಸಿದೆ. ಇದು ಸ್ವಾಗತಾರ್ಹ ವಿಚಾರ.‌ ಇದೇ ರೀತಿ ಮುಂದುವರೆಯಲಿ’ ಎಂದು ಹಾರೈಸಿದರು.  

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, 'ವಿಧಾನ ಮಂಡಲ ಅಧಿವೇಶನದಲ್ಲಿ ನಾನು ಒಮ್ಮೆ ಮಂಗಳೂರನ್ನು ‘ಡೆಡ್ ಸಿಟಿ’ ಎಂದು ಕರೆದಿದ್ದೆ. ಇದಕ್ಕೆ ವಿರೋಧ ಪಕ್ಷದ ಶಾಸಕರು ನನ್ನ ವಿರುದ್ಧ ತಿರುಗಿಬಿದ್ದಿದ್ದರು. ನಾನು ಏಕೆ ಹಾಗೆ ಹೇಳಿದೆ ಎಂದು ಅವರಿಗೆಲ್ಲ ಮನವರಿಕೆ ಮಾಡಿದೆ. ರಾಜ್ಯದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಚಿಂತನೆಗಳಿಗೆ ಅವರೂ ಬೆಂಬಲ ಸೂಚಿಸಿದ್ದಾರೆ. ಈ ಸಮಾವೇಶದಲ್ಲಿ ಪಕ್ಷ ಭೇದ ಮರೆತು ಸಂಸದರು ಶಾಸಕರು ಭಾಗವಹಿಸಿದ್ದಾರೆ’ ಎಂದರು. 

‘ಕರಾವಳಿ ಸೌಂದರ್ಯದ ಖನಿ. ಜ್ಞಾನ ಸಂಪತ್ತಿನ ರಾಶಿ. ದೈವ ದೇವಾಲಯಗಳ ಬೀಡು. ವ್ಯಾಪಾರಿಗಳಿಗೆ ನಿಧಿ. ಪ್ರವಾಸಿಗರಿಗೆ ಸ್ವರ್ಗ. ಬ್ಯಾಂಕ್‌ಗಳನ್ನು ಸ್ಥಾಪಿಸಿ  ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದ ಇಲ್ಲಿನ ಹಿರಿಯರು ಉತ್ತಮ ಪರಂಪರೆ ಬಿಟ್ಟು ಹೋಗಿದ್ದಾರೆ. ಇವುಗಳನ್ನೆಲ್ಲ ಉಳಿಸಿಕೊಂಡು ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ. ’ ಎಂದರು.

ಆರೋಗ್ಯ ಪ್ರವಾಸೋದ್ಯಮಕ್ಕೂ ಕರಾವಳಿ ಹೇಳಿ ಮಾಡಿಸಿದ ತಾಣ. ಸಿದ್ದರಾಮಯ್ಯ ಅವರು ಹಿಂದೆಲ್ಲ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳಕ್ಕೆ ಬರುತ್ತಿದ್ದರು.‌ ಮುಖ್ಯಮಂತ್ರಿ ಆದ ಬಳಿಕ ಬಿಟ್ಟುಬಿಟ್ಟರು.  ಎಂಟು ವೈದ್ಯಕೀಯ ಕಾಲೇಜುಗಳು ಇಲ್ಲಿವೆ. ಇಲ್ಲಿನ ಪಿ.ಯು.ಕಾಲೇಜುಗಳಲ್ಲಿ ಬೇರೆ ಬೇರೆ ಕಡೆಯಿಂದ ಬಂದ 87 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.  ಇಲ್ಲಿನ ಶಿಸ್ತು, ಸಂಸ್ಕಾರ, ಇಲ್ಲಿನವರು  ಸಂಸ್ಕೃತಿಗೆ ಕೊಡುವ ಗೌರವ ಇದನ್ನೆಲ್ಲ ಸಾಧ್ಯವಾಗಿಸಿದೆ ಎಂದರು.  

ಕೆಲ ವರ್ಷದ ಹಿಂದೆ ಉಡುಪಿಯಲ್ಲಿ ನಡೆದ ಘಟನೆಯಿಂದ ಆದ ಬೆಳವಣಿಗೆಗಳ ಬಗ್ಗೆ ನನ್ನಲ್ಲಿ ಕೆಲವರು ಆತಂಕ ತೋಡಿಕೊಂಡಿದ್ದರು. ತಡ ರಾತ್ರಿಯವರೆಗೂ ಮಂಗಳೂರು ಚಟುವಟಿಕೆಯ ತಾಣವಾಗಿರಬೇಕು. ಯಾರೇ ಇಲ್ಲಿ ಬಂದರೂ ನಿಶ್ಚಂತೆಯಿಂದ ಉದ್ದಿಮೆಗಳನ್ನು ನಡೆಸುವ ವಾತಾವರಣ ನಿರ್ಮಾಣವಾಗಬೇಕು ಎಂದರು. 

‘ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವವರಿಗೆ ತೆರಿಗೆಯಲ್ಲಿ ಏನೆಲ್ಲ ರಿಯಾಯಿತಿ ನೀಡಬಹುದು ಎಂಬ ಬಗ್ಗೆ ಸಮಾಲೋಚಿಸಿ ಕ್ರಮ ವಹಿಸುತ್ತೇವೆ. ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ರೂಪಿಸುತ್ತೇವೆ.  ಇದಕ್ಕಾಗಿ ನೋಡಲ್‌ ಏಜೆನ್ಸಿಯನ್ನು ನೇಮಿಸುತ್ತೇವೆ.  ಕರಾವಳಿಯು ಹಿಂದಿನ ಮೆರುಗನ್ನು ಮರಳಿ ಪಡೆಯಬೇಕೆಂಬುದು ನಮ್ಮ ಆಶಯ ಎಂದರು.

 
ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ,  ‘ಪ್ರವಾಸೋದ್ಯಮದಲ್ಲಿ ಜಾಗತಿಕ ತಾಣವಾಗಿ ರಾಜ್ಯದ ಕರಾವಳಿ ಹೊರಹೊಮ್ಮಬೇಕು. ಇದು ರಾಜ್ಯದ ಅಭಿವೃದ್ಧಿಗೂ ಕೊಡುಗೆ ನೀಡುವಂತಾಗಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ‌ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ‘ಕರಾವಳಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹೆಚ್ಚಳವಾಗಿದ್ದು, ಜನ ನಿರ್ಭೀತಿಯಿಂದ  ಹೊರ ಬರುವಂತಹ ಸಕಾರಾತ್ಮಕ ವಾತಾವರಣ ರೂಪುಗೊಂಡಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಡಿದ್ದೆವೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕಿದೆ’ ಎಂದರು. 

ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಮಂಕಾಳ ವೈದ್ಯ ಮಾತನಾಡಿದರು.‌

ಸಂಸದರಾದ ಕ್ಯಾ,ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ರಾಜೇಗೌಡ ಇತರರು ಭಾಗವಹಿಸಿದ್ದರು.   

ಹೂಡಿಕೆಗೆ ಮುನ್ನ ಉದ್ಯಮಿಗಳೊಂದಿಗೆ ಮಾಡಿಕೊಂಡ ಒಪ್ಪಂದ ಪತ್ರಗಳನ್ನು ಸಿ.ಎಂ ವಿತರಿಸಿದರು ಅಂತರರಾಷ್ಟ್ರೀಯ ಗಾಳಿಪಟ ಉತ್ಸವದ ಲಾಂಛನ ಬಿಡುಗಡೆ ಮಾಡಿದರು

ಸ್ವತಃ ಮುಖ್ಯಮಂತ್ರಿಯವರೇ ಭಾಗವಹಿಸಿರುವ ಈ ಸಮಾವೇಶ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಬದ್ಧತೆಯನ್ನು ಸಾರಿದೆ. ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಪ್ರತೀಕವಿದು

-ಎಚ್‌.ಕೆ.ಪಾಟೀಲ ಪ್ರವಾಸೋದ್ಯಮ ಸಚಿವ

ಧರ್ಮಗಳನ್ನ ಎತ್ತಿಕಟ್ಟಿದರೆ ದೇಶಭಕ್ತಿ ಬರುತ್ತದೆಯೇ?‘

‘ಧರ್ಮ‌ಗಳನ್ನು ಎತ್ತಿ ಕಟ್ಟುವುದರಿಂದ ದೇಶ ಒಡೆಯುವುದರಿಂದ ದೇಶ ಭಕ್ತಿ ಬರುತ್ತದೆಯೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಪ್ರಶ್ನಿಸಿದರು.‌ ‘ಧರ್ಮ‌ ಜಾತಿ ಸಮಾಜ  ಒಡೆಯುವ ಕೆಲಸವನ್ನು ಯಾವತ್ತೂ ಮಾಡಬಾರದು. ಎಲ್ಲ ಧರ್ಮಗಳೂ ಪ್ರೀತಿಯನ್ನು ಸಾರುತ್ತವೆಯೇ ಹೊರತು ದ್ವೇಷವನ್ನಲ್ಲ. ಕುವೆಂಪು ಅವರ ಹೆಸರನ್ನು ಹೇಳಿದರೆ ಸಾಲದು ಅವರು ಹೇಳಿದಂತೆಯೇ ಸರ್ವ ಜನಾಂಗದ ಶಾಂತಿಯ ತೋಟವನ್ನು ರೂಪಿಸುವ ನಿಟ್ಟಿನಲ್ಲಿ ನಡೆದುಕೊಳ್ಳುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು. ಕಾನೂನು ಕೈಗೆತ್ತಿಕೊಳ್ಳುವುದು ಯಾವತ್ತೂ ಒಳ್ಳೆಯದಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.