ADVERTISEMENT

ಚಿತ್ರಾಪುರ ದೇವಸ್ಥಾನ ಬಳಿ ಕಡಲ್ಕೊರೆತ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 16:00 IST
Last Updated 6 ಆಗಸ್ಟ್ 2019, 16:00 IST
ಕಡಲ್ಕೊರೆತದಿಂದಾಗಿ ಚಿತ್ರಾಪುರ ದೇವಸ್ಥಾನದ ಮುಂಭಾಗದಲ್ಲಿರುವ ಸಮುದ್ರ ತೀರದ ಮೆಟ್ಟಿಲು, ರಸ್ತೆ ಕೊಚ್ಚಿಹೋಗಿದೆ.
ಕಡಲ್ಕೊರೆತದಿಂದಾಗಿ ಚಿತ್ರಾಪುರ ದೇವಸ್ಥಾನದ ಮುಂಭಾಗದಲ್ಲಿರುವ ಸಮುದ್ರ ತೀರದ ಮೆಟ್ಟಿಲು, ರಸ್ತೆ ಕೊಚ್ಚಿಹೋಗಿದೆ.   

ಸುರತ್ಕಲ್: ಚಿತ್ರಾಪುರ ದೇವಸ್ಥಾನದ ಮುಂಭಾಗದಲ್ಲಿರುವ ಸಮುದ್ರ ತೀರದಲ್ಲಿ ಕಡಲ್ಕೊರೆತ ಅಧಿಕವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ಧಾರೆ. ಸಮುದ್ರದಲ್ಲಿ ವಿಪರೀತ ಗಾಳಿ ಹಾಗೂ ಸಮುದ್ರದ ಅಬ್ಬರದ ಅಲೆಗಳು ಸಮುದ್ರದ ತೀರಕ್ಕೆ ಅಪ್ಪಳಿಸುತ್ತಿವೆ.

ಮೀನುಗಾರಿಕಾ ಇಲಾಖೆ ಈ ಹಿಂದೆ ಹಾಕಿದ ತಡೆಗೋಡೆಯೂ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಸಮುದ್ರ ಕಿನಾರೆ ಬಳಿ ಈ ಹಿಂದೆ ಮಾಡಿದ ಮೆಟ್ಟಿಲು, ರಸ್ತೆ ಕೊಚ್ಚಿ ಹೋಗುತ್ತಿದೆ.

ತೆಂಗಿನ ಮರ, ರಸ್ತೆ, ಮೈದಾನಗಳು ಹೇಳ ಹೆಸರಿಲ್ಲದಂತೆ ಸಮುದ್ರದ ಒಡಲಲ್ಲಿ ಲೀನವಾಗುತ್ತಿದೆ. ಮಂಗಳವಾರ ಮರಳು ಚೀಲ ಅಳವಡಿಸುವ ಕಾರ್ಯ ನಡೆಯಿತು. ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರೂ ಸಮುದ್ರದ ಆರ್ಭಟಕ್ಕೆ ಮರಳು ಚೀಲ ನೀರು ಪಾಲಾಗುತ್ತಿದೆ.

ADVERTISEMENT

ಜಿಲ್ಲಾಧಿಕಾರಿ ಭೇಟಿ: ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು, ಕಡಲ್ಕೊರೆತದ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ತಾತ್ಕಾಲಿಕ ನೆಲೆಯಲ್ಲಿ ಕಲ್ಲು ಹಾಕಲು ಆದೇಶ ನೀಡಿದರು. ಪರಿಸ್ಥಿತಿ ಅವಲೋಕಿಸುವಂತೆ ಹಾಗೂ ಸ್ಥಳೀಯರೊಂದಿಗೆ ಸಂಪರ್ಕದಲ್ಲಿರುವಂತೆ ಕಂದಾಯ ಅಧಿಕಾರಿಗಳಿಗೆ ಅದೇಶ ನೀಡಿದರು.

ಚಿತ್ರಾಪುರ ಪ್ರದೇಶದ ಸಮುದ್ರ ಕಿನಾರೆಯ 350 ಮೀಟರ್ ಪ್ರದೇಶದಲ್ಲಿ ಈ ಹಿಂದೆ ಕಲ್ಲಿನಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಮುಂದಿನ ಭಾಗವಾಗಿ ಇನ್ನೂ 350 ಮೀಟರ್ ಪ್ರದೇಶದಲ್ಲಿ ಕಲ್ಲಿನ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದ್ದು, ಇದನ್ನು ತಕ್ಷಣ ಮಂಜೂರು ಮಾಡುವಂತೆ ಮಾಜಿ ಮೇಯರ್ ಗಣೇಶ ಹೊಸಬೆಟ್ಟು, ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.

ಮುಕ್ಕ, ಸಸಿಹಿತ್ಲು ಪ್ರದೇಶದಲ್ಲೂ ಸಮುದ್ರದ ಒತ್ತಡವು ಅಧಿಕವಾಗಿದ್ದು, ಮುಕ್ಕ ಪ್ರದೇಶದಲ್ಲೂ ಕಡಲ್ಕೊರೆತ ಮತ್ತೆ ಪ್ರಾರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.