ADVERTISEMENT

ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾ ಅಳವಡಿಕೆ– ಆರೋಪ

ಟೆಂಡರ್‌ ಅಕ್ರಮದ ತನಿಖೆಗೆ ಕಾಂಗ್ರೆಸ್‌ ಪಟ್ಟು * ಟೆಂಡರ್‌ ಸಿಗದವರ ಪಿತೂರಿ– ಆಡಳಿತ ಪಕ್ಷ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 15:58 IST
Last Updated 30 ನವೆಂಬರ್ 2022, 15:58 IST
ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್‌ ಡಿಸೋಜ ಹಾಗೂ ಸದಸ್ಯ ಎ.ಸಿ.ವಿನಯರಾಜ್‌ ಅವರು ಮೇಯರ್‌  ಪೀಠದ ಎದುರು ಧಾವಿಸಿ ಆಯುಕ್ತರು ಬಳಸಿದ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಉಪಮೇಯರ್‌ ಪೂರ್ಣಿಮಾ, ಮೇಯರ್ ಜಯಾನಂದ ಅಂಚನ್‌ ಹಾಗೂ ಆಯುಕ್ತ ಅಕ್ಷಯ್‌ ಶ್ರೀಧರ್‌ ಇದ್ದಾರೆ– ಪ್ರಜಾವಾಣಿ ಚಿತ್ರ
ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್‌ ಡಿಸೋಜ ಹಾಗೂ ಸದಸ್ಯ ಎ.ಸಿ.ವಿನಯರಾಜ್‌ ಅವರು ಮೇಯರ್‌  ಪೀಠದ ಎದುರು ಧಾವಿಸಿ ಆಯುಕ್ತರು ಬಳಸಿದ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಉಪಮೇಯರ್‌ ಪೂರ್ಣಿಮಾ, ಮೇಯರ್ ಜಯಾನಂದ ಅಂಚನ್‌ ಹಾಗೂ ಆಯುಕ್ತ ಅಕ್ಷಯ್‌ ಶ್ರೀಧರ್‌ ಇದ್ದಾರೆ– ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಮಾಂಡ್ ಕಂಟ್ರೋಲ್ ಸೆಂಟರ್‌ನ ಎರಡನೇ ಹಂತದ ₹ 32 ಕೋಟಿ ಮೊತ್ತದ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಪಾಲಿಕೆ ಸಮಾನ್ಯ ಸಭೆಯಲ್ಲಿ ಬುಧವಾರ ಈ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್‌ನ ಎ.ಸಿ.ವಿನಯರಾಜ್‌, ‘ತಮಗೆ ಬೇಕಾದವರಿಗೆ ಟೆಂಡರ್‌ ನೀಡಲು ಷರತ್ತುಗಳನ್ನು ಸಡಿಲಗೊಳಿಸಲಾಗಿದೆ. ಮಧ್ಯಪ್ರದೇಶ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದ್ದ ಟೆಕ್ನೊಸಿಸ್‌ ಸೆಕ್ಯುರಿಟೀಸ್ ಪ್ರೈವೈಟ್ ಲಿಮಿಟೆಡ್ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಈ ಕಾಮಗಾರಿಯ ಸಲಹೆಗಾರ ಸಂಸ್ಥೆಯಾದ ಸ್ಟೆಪ್ ಇನ್ ಸ್ಟೋನ್ ಕಂಪನಿಯೂಸ್ವತ ರಾಡಾರ್ ಹಾರ್ಡ್‍ವೇರ್ ವಿತರಣೆಯಲ್ಲಿ ತೊಡಗಿದ್ದು, ಇದು ಹಿತಾಸಕ್ತಿ ಸಂಘರ್ಷಕ್ಕೂ ಕಾರಣವಾಗಿದೆ. ಕಪ್ಪು ಪಟ್ಟಿಗೆ ಸೇರ್ಪಡೆಗೆ ಅನುಸರಿಸಲಾದ ಕ್ರಮ ಸರಿಯಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್‌ ಟೆಕ್ನೋಸಿಸ್‌ ಕಂಪನಿಯನ್ನು ಕಪ್ಪುಪಟ್ಟಿಯಿಂದ ಕೈಬಿಡುವಂತೆ ಆದೇಶ ಮಾಡಿತ್ತು. ಅದನ್ನೇ ನೆಪವನ್ನಾಗಿಸಿ ಆ ಕಂಪನಿಗೇ ಟೆಂಡರ್‌ ನೀಡಲಾಗಿದೆ. ಆದರೆ, ಆ ಸಂಸ್ಥೆಯು ಈ ಕಾಮಗಾರಿಯ ಟೆಂಡರ್ ಪಡೆಯುವ ಅರ್ಹತೆಯನ್ನೇ ಹೊಂದಿಲ್ಲ’ ಎಂದು ವಿವರಿಸಿದರು.

‘ಈ ಕಂಪನಿಯು ಟೆಂಡರ್‌ ಷರತ್ತಿನಲ್ಲಿ ಉಲ್ಲೇಖಿಸಿದಸಿ.ಸಿ.ಟಿ.ವಿ. ಕ್ಯಾಮೆರಾಗಳ ಬದಲು ಚೀನಾ ನಿರ್ಮಿತ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿದೆ. ಇದನ್ನೂ ಅಧಿಕಾರಿಗಳು ಪರಿಶೀಲಿಸಿಲ್ಲ. ಅಮೆರಿಕ ಹಾಗೂ ಇಂಗ್ಲೆಂಡ್‍ ದೇಶಗಳು ಭದ್ರತೆಯ ಕಾರಣಕ್ಕಾಗಿ ಈ ಕ್ಯಾಮೆರಾಗಳನ್ನು ತಮ್ಮ ದೇಶದಲ್ಲಿ ನಿಷೇಧಿಸಿವೆ. ಅಂತಹ ಸಂಸ್ಥೆಗೆ ನಗರದಲ್ಲಿ ರತ್ನಗಂಬಳಿ ಹಾಸಲಾಗಿದೆ’ ಎಂದು ಟೀಕಿಸಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.

ADVERTISEMENT

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸಚೇತಕ ಪ್ರೇಮಾನಂದ ಶೆಟ್ಟಿ ಹಾಗೂ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ‘ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ಸದಸ್ಯರಿಗೆ ಬೇರಾವುದೊ ಹಿತಾಸಕ್ತಿ ಇದ್ದಂತಿದೆ’ ಎಂದು ಟೀಕಿಸಿದರು. ಈ ಬಗ್ಗೆ ಕೆಲಹೊತ್ತು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಯಿತು. ಆಯುಕ್ತ ಅಕ್ಷಯ್ ಶ್ರೀಧರ್, ‘ಟೆಕ್ನೋಸಿಸ್‌ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದನ್ನು ಹೈಕೋರ್ಟ್‌ ರದ್ದುಪಡಿಸಿದೆ. ಹಾಗಾಗಿ ಆ ಕಂಪನಿಗೆ ಟೆಂಡರ್‌ ನೀಡಿರುವುದರಲ್ಲಿ ತಪ್ಪಿಲ್ಲ’ ಎಂದುಸಮಜಾಯಿಷಿ ನೀಡಲು ಯತ್ನಿಸಿದರು.

ಇದರಿಂದ ಆಕ್ರೋಶಗೊಂಡ ವಿನಯರಾಜ್‌, ‘ವಕೀಲನಾದ ನನಗೇ ಕಾನೂನು ಕಲಿಸಲು ಬರಬೇಡಿ. ಕಾನೂನು ಏನೆಂದು ನನಗೆ ಗೊತ್ತು’ ಎಂದರು. ಇದಕ್ಕೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ ಆಯುಕ್ತರು, ‘ಗೊತ್ತಿದ್ದರೆ ಕುಳಿತುಕೊಳ್ಳಿ’ ಎಂದರು. ಆಯುಕ್ತರ ವರ್ತನೆ ಖಂಡಿಸಿದ ವಿರೊಧ ಪಕ್ಷದ ಸದಸ್ಯರು, ‘ಪಾಲಿಕೆಯಲ್ಲಿ ಮೇಯರ್‌ಗೆ ಪರಮಾಧಿಕಾರ. ಸದಸ್ಯರಿಗೆ ಈ ರೀತಿ ಸೂಚಿಸುವ ಅಧಿಕಾರ ಆಯುಕ್ತರಿಗೆ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮೇಯರ್‌ ಪೀಠದ ಎದುರು ಧಾವಿಸಿ ಪ್ರತಿಭಟಿಸಿದರು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಮೇಯರ್ ಭರವಸೆ ನೀಡಿದ ಬಳಿಕ ಆಸನಗಳಿಗೆ ಮರಳಿದರು.

‘ಟೆಂಡರ್‌ ಅಕ್ರಮದ ತನಿಖೆ ಮಾಡದಿದ್ದರೆ ಎಲ್ಲಿಗೆ ಪ್ರಶ್ನಿಸಬೇಕೋ ಅಲ್ಲೇ ಪ್ರಶ್ನಿಸುತ್ತೇವೆ’ ಎಂದು ವಿನಯರಾಜ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.