ಉಳ್ಳಾಲ: ‘ಯಾವುದೇ ಧರ್ಮದ ಬಗ್ಗೆ ಅನಗತ್ಯ ಹೇಳಿಕೆ ನೀಡಿ ವಿವಾದ ಸೃಷ್ಟಿಸುವುದು ಸಲ್ಲದು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.
ಶಬರಿಮಲೆಗೆ ಯುವತಿಯರ ಪ್ರವೇಶ, ಸಾಹಿತಿ ಭಗವಾನ್ ಶ್ರೀರಾಮಚಂದ್ರನ ವಿರುದ್ಧ ಹಾಗೂ ಪ್ರವಾದಿ(ಸ) ವಿರುದ್ಧದ ಹೇಳಿಕೆ ಖಂಡಿಸಿ ಸೋಮವಾರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೀರಿಯಲ್ಲಿ ನಡೆದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು.
‘ಶತಮಾನಗಳ ಹಿಂದಿನ ಧಾರ್ಮಿಕ ವಿಚಾರಗಳನ್ನು ಆಧುನಿಕ ಕಾಲಘಟ್ಟವಾಗಿರುವ ಇಂದು ವಿಮರ್ಶಿಸುವವರು ಮೂರ್ಖರು. ಇದು ಅಶಾಂತಿ ಸೃಷ್ಟಿಸುವ ಹುನ್ನಾರ’ ಎಂದು ಮುಖಂಡ ಉಮ್ಮರ್ ಪಜೀರ್ ಹೇಳಿದರು. ‘ಶಬರಿಮಲೆ ವಿಚಾರದಲ್ಲಿ 800 ವರ್ಷಗಳ ಆಚಾರಕ್ಕೆ ಅಪಚಾರ ಮಾಡಬಾರದು. ಆದರೆ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಟೀಕಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಧ್ಯಕ್ಷತೆ ವಹಿಸಿದ್ದರು. ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಪ್ರಮುಖರಾದ ಮುಸ್ತಫಾ ಮಲಾರ್, ಉಮ್ಮರ್ ಪಜೀರ್, ದಿನೇಶ್ ಕುಂಪಲ, ದಿನೇಶ್ ರೈ, ಆಲ್ವಿನ್ ಡಿಸೋಜ, ಅಬ್ದುಲ್ ರಹ್ಮಾನ್ ಕೋಡಿಜಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.