ADVERTISEMENT

ಸಂವಿಧಾನ ಧರ್ಮ ಗ್ರಂಥದಷ್ಟೇ ಪವಿತ್ರ: ಪ್ರೊ. ಪಿ.ಎಲ್ ಧರ್ಮ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಸಂವಿಧಾನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:33 IST
Last Updated 26 ನವೆಂಬರ್ 2021, 16:33 IST
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಪ್ರೊ. ಪಿ.ಎಲ್.ಧರ್ಮ, ಸಂವಿಧಾನದ ಪೀಠಿಕೆ ಇರುವ ಫಲಕವನ್ನು ಅನಾವರಣಗೊಳಿಸಿದರು.
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಪ್ರೊ. ಪಿ.ಎಲ್.ಧರ್ಮ, ಸಂವಿಧಾನದ ಪೀಠಿಕೆ ಇರುವ ಫಲಕವನ್ನು ಅನಾವರಣಗೊಳಿಸಿದರು.   

ಉಳ್ಳಾಲ: ‘ಸಂವಿಧಾನದ ಆಶಯಗಳ ಕುರಿತು ಮಾತನಾಡುವ ಬದಲು ಅದನ್ನು ದಿನನಿತ್ಯದ ಜೀವನದಲ್ಲಿ ಅನುಷ್ಠಾನಕ್ಕೆ ತರುವುದೇ ಸಂವಿಧಾನ ದಿನಾಚರಣೆಯ ಪ್ರಮುಖ ಧ್ಯೇಯ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್ ಧರ್ಮ ಅಭಿಪ್ರಾಯಪಟ್ಟರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್, ಇನ್‍ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್, ಮಾನವಿಕ ವಿಭಾಗದ ಸಹಯೋಗದೊಂದಿಗೆ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಎಸ್.ಮೆಡಿಕಲ್ ಅಕಾಡೆಮಿಯ ಗ್ಲಾಸ್ ಹೌಸ್‍ನಲ್ಲಿ ಸಂವಿಧಾನದ ಪೀಠಿಕೆಯ ಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

‘ಭಾರತದ ಸಂವಿಧಾನ ಧರ್ಮ ಗ್ರಂಥದಷ್ಟೇ ಪವಿತ್ರವಾದುದು. ಧರ್ಮ ಗ್ರಂಥವನ್ನು ಅಧ್ಯಯನ ಮಾಡುವ ರೀತಿಯಲ್ಲೇ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕು’ ಎಂದರು.

ADVERTISEMENT

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ, ಇನ್‍ಸ್ಟಿಟ್ಯೂಟ್ ಆಫ್ ಕಮ್ಯನಿಕೇಶನ್‍ನ ಡೀನ್ ಪ್ರೊ. ರವಿರಾಜ್, ಇನ್‍ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್‌ನ ಡೀನ್ ಡಾ.ವಿನೋದ್ ಅರನ್ಹಾ, ಮಾನವಿಕ ವಿಭಾಗದ ಮುಖ್ಯಸ್ಥೆ ಡಾ.ಸಾಯಿಗೀತಾ ಇದ್ದರು.

ಚುನಾವಣಾ ಸಾಕ್ಷರತಾ ಕ್ಲಬ್‍ನ ನೋಡಲ್ ಅಧಿಕಾರಿ ಸುಮಾ ಎನ್. ಎಸ್ ಸ್ವಾಗತಿಸಿದರು. ಕ್ಲಬ್ ಸದಸ್ಯೆ ಶಾಲೆಟ್ ಡಿ. ಅಲ್ಮೆಡಾ ಕಾರ್ಯಕ್ರಮ ನಿರೂಪಿಸಿದರು. ನೇಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾನ ಪ್ರಾರ್ಥನೆ ಹಾಡಿದರು. ಡಾ. ಕೌಶಿಕ್ ಶೆಟ್ಟಿ ವಂದಿಸಿದರು.

‘ಸಂವಿಧಾನ ಕಾನೂನಿಗಿಂತ ಮಿಗಿಲು’

ಪುತ್ತೂರು: ‘ಸರ್ಕಾರವು ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರ ವ್ಯಾಪ್ತಿಯನ್ನು ವ್ಯಾಖ್ಯಾನಿಸುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ಧರಿಸುತ್ತದೆ. ಹೀಗಾಗಿ ಸಂವಿಧಾನವು ಎಲ್ಲ ಕಾನೂನುಗಳಿಗಿಂತ ಮಿಗಿಲಾದುದು. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ’ ಎಂದು ಬಿಇಎಲ್ ಸಂಸ್ಥೆಯ ನಿವೃತ್ತ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಟಿ.ಎನ್.ಸಿ.ಲಕ್ಷ್ಮಿನರಸಿಂಹನ್ ಹೇಳಿದರು.

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನವೆಂದು ಪರಿಗಣಿಸಲಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ ಪ್ರಸನ್ನ ಕೆ. ಮಾತನಾಡಿ, ‘ಜನಸಾಮಾನ್ಯರಲ್ಲಿ ಅದರಲ್ಲೂ ಮುಖ್ಯವಾಗಿ ಯುವಜನರಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನದ ಆಶಯಕ್ಕೆ ಎಲ್ಲರೂ ಬದ್ಧರಾಗಿದ್ದು, ದೇಶದ ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಲು ಸನ್ನದ್ಧರಾಗಿರಬೇಕು’ ಎಂದರು.

ಎಂಬಿಎ ವಿಭಾಗದ ನಿರ್ದೇಶಕ ಡಾ.ಶೇಖರ್.ಎಸ್.ಅಯ್ಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಸರೋಶ್ ನಾಯ್ಕ್ ಸ್ವಾಗತಿಸಿದರು. ರಾಜಶ್ರೀ ವಂದಿಸಿದರು. ಪೃಥ್ವಿ ಶಂಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.