ಮಂಗಳೂರು: ಕೋವಿಡ್–19 ಸೋಂಕು ತಗುಲಿರುವ ಉತ್ತರ ಭಾರತದ ಕಾರ್ಮಿಕನೊಬ್ಬ ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆತನನ್ನು ಪತ್ತೆಮಾಡಿದ ಅಧಿಕಾರಿಗಳು ಮನವೊಲಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಂಪನಕಟ್ಟೆಯ ನಿರ್ಮಾಣ ಹಂತದ ಕಟ್ಟಡವೊಂದರ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರಾಖಂಡ ರಾಜ್ಯದ ಕೂಲಿ ಕಾರ್ಮಿಕನಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಈತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹಿಸಿ, ಪರೀಕ್ಷಿಸಿದಾಗ ಕೋವಿಡ್–19 ಸೋಂಕು ಇರುವುದು ದೃಢಪಟ್ಟಿತ್ತು.
ಸೋಮವಾರ ಸಂಜೆ ಆತನನ್ನು ವೆನ್ಲಾಕ್ ಕೋವಿಡ್ ವಿಶೇಷ ಆಸ್ಪತ್ರೆಗೆ ಕರೆದೊಯ್ಯಲು ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಆಂಬುಲೆನ್ಸ್ನೊಂದಿಗೆ ಖಾಸಗಿ ಆಸ್ಪತ್ರೆಗೆ ಹೋಗಿತ್ತು. ತನಗೆ ಕೋವಿಡ್ ಸೋಂಕು ಇರುವುದನ್ನು ತಿಳಿದ ರೋಗಿ, ಆಂಬುಲೆನ್ಸ್ ಹತ್ತಿಸುತ್ತಿದ್ದಾಗ ತಪ್ಪಿಸಿಕೊಂಡು ಓಡಿಹೋದ.
ಕೆಲ ಹೊತ್ತಿನ ಬಳಿಕ ಆತ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ ಇರುವುದು ಗೊತ್ತಾಯಿತು. ಮಂಗಳೂರು ಉತ್ತರ ಠಾಣೆ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಅಲ್ಲಿಗೆ ತೆರಳಿ ಆತನ ಮನವೊಲಿಸಿದರು. ಆಪ್ತ ಸಮಾಲೋಚನೆ ನಡೆಸಿ, ಚಿಕಿತ್ಸೆ ಕುರಿತು ಧೈರ್ಯ ತುಂಬಿದರು. ಬಳಿಕ ಆತನನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.