ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಪುತ್ತೂರು: ಬಪ್ಪಳಿಗೆ ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಸೌದಿ ಅರೇಬಿಯ ಮತ್ತು ದುಬೈ ಘಟಕಗಳ ಸಹಯೋಗದೊಂದಿಗೆ ‘ಅಮರ್ ಅಕ್ಬರ್ ಅಂತೋನಿ’ ಸೌಹಾರ್ದ ರೋಲಿಂಗ್ ಟ್ರೋಫಿ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಿ ಡಿ.24ರಿಂದ 29ರವರೆಗೆ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಬಪ್ಪಳಿಗೆ ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸಂಘಟಕ ಅಬ್ದುಲ್ ರಝಾಕ್ ಬಪ್ಪಳಿಗೆ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 130 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ 80 ತಂಡಗಳನ್ನು ಆಯ್ಕೆ ಮಾಡಿ ಅವಕಾಶ ನೀಡಲಾಗುವುದು. ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳ 12 ತಂಡಗಳಿಗೆ ಪ್ರತ್ಯೇಕವಾಗಿ ಟೂರ್ನಿ ನಡೆಸಲಾಗುವುದು. ವಿಜೇತ ತಂಡಗಳಿಗೆ ಪ್ರಥಮ ₹ 33,333, ದ್ವಿತೀಯ ₹ 22,222, ತೃತೀಯ ₹ 20,222, ಚತುರ್ಥ ₹10,222, 5ನೇ ಬಹುಮಾನ ₹10,001, 6ನೇ ಬಹುಮಾನ ₹ 5001 ನೀಡಲಾಗುವುದು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೋಲಿಂಗ್ ಟ್ರೋಫಿ ನೀಡಲಾಗುವುದು ಎಂದರು.
ಡಿ.24ರಂದು ಬೆಳಿಗ್ಗೆ 9 ಗಂಟೆಗೆ ಟೂರ್ನಿ ಆರಂಭಗೊಳ್ಳಲಿದ್ದು, ಡಿ.29ರವರೆಗೆ ನಿರಂತರವಾಗಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಟೂರ್ನಿ ಉದ್ಘಾಟಿಸುವರು. ಶಾಸಕ ಅಶೋಕ್ಕುಮಾರ್ ರೈ ಭಾಗವಹಿಸುವರು. ಡಿ.29ರಂದು ಸಂಜೆ ಸಮಾರೋಪ, ಬಹುಮಾನ ವಿತರಣೆ ನಡೆಯಲಿದೆ. 26 ಮಂದಿ ಸಾಮಾಜಿಕ ಕಾರ್ಯಕರ್ತರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕ್ಲಬ್ನ ಪ್ರಧಾನ ಕಾರ್ಯದರ್ಶಿ ಅರುಣ್ ಬಪ್ಪಳಿಗೆ, ಸಹ ಸಂಘಟಕರಾದ ಮೋನು ಬಪ್ಪಳಿಗೆ, ಶಾಫಿ ಮೊಹಾದ್ ಬಪ್ಪಳಿಗೆ, ಅಮರ್ ಅಕ್ಬರ್ ಅಂತೋನಿ ಬೆಂಗಳೂರು ಘಟಕದ ಸಾಹಿದ್ ಬರೆಪ್ಪಾಡಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.