ADVERTISEMENT

ಸಮಸ್ಯೆ ಚಿತ್ರಣ: ಜಿ.ಕೆ.ಭಟ್‌ಗೆ ಪ್ರಥಮ ಬಹುಮಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 14:10 IST
Last Updated 15 ಆಗಸ್ಟ್ 2022, 14:10 IST
ಎಂ.ಜಿ.ಹೆಗಡೆ, ಜೆರಾಲ್ಡ್ ಟವರ್ಸ್, ಸುನಿಲ್ ಬಜಿಲ್‌ಕೇರಿ ಅವರು ಜಿ.ಕೆ.ಭಟ್ ಅವರಿಗೆ ಬಹುಮಾನ ವಿತರಿಸಿದರು.
ಎಂ.ಜಿ.ಹೆಗಡೆ, ಜೆರಾಲ್ಡ್ ಟವರ್ಸ್, ಸುನಿಲ್ ಬಜಿಲ್‌ಕೇರಿ ಅವರು ಜಿ.ಕೆ.ಭಟ್ ಅವರಿಗೆ ಬಹುಮಾನ ವಿತರಿಸಿದರು.   

ಮಂಗಳೂರು: ನಗರದ ಸಮಸ್ಯೆಗಳನ್ನು ಬಿಂಬಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಂಧುತ್ವ ವೇದಿಕೆ ಹಮ್ಮಿಕೊಂಡಿದ್ದ ವಿಭಿನ್ನ ಸ್ಪರ್ಧೆಯಲ್ಲಿ ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಪ್ರಥಮ ಬಹುಮಾನ ₹ 5,000 ಮೊತ್ತ ಪಡೆದಿದ್ದಾರೆ. ದ್ವಿತೀಯ ಬಹುಮಾನವನ್ನು (₹ 2,500) ದೀಕ್ಷಿತ್ ಅತ್ತಾವರ ಗಳಿಸಿದ್ದಾರೆ.

ಅನ್ಸರುದ್ದೀನ್ ಸಲ್ಮಾರ್, ಯೋಗೀಶ್ ನಾಯಕ್, ಸಂಜನಾ ಭಟ್ ಅವರಿಗೆ ಪ್ರೋತ್ಸಾಹಕ ಬಹುಮಾನಗಳು ದೊರೆತಿವೆ. ರಸ್ತೆ ಗುಂಡಿ ತಪ್ಪಿಸಲು ಹೋಗಿ ವಿಭಜಕಕ್ಕೆ ಡಿಕ್ಕಿ ಹೊಡೆದು ವಿದ್ಯಾರ್ಥಿ ಆಶಿತ್ ಮೃತಪಟ್ಟಿರುವ ಸ್ಥಳದಲ್ಲಿ ಸೋಮವಾರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಮಾಜಿಕ ಮುಖಂಡರಾದ ಎಂ.ಜಿ.ಹೆಗಡೆ, ಜೆರಾಲ್ಡ್ ಟವರ್, ಸುನಿಲ್ ಬಜಿಲಕೇರಿ, ಪ್ರಸನ್ನ ರವಿ ಬಹುಮಾನ ವಿತರಿಸಿದರು.

‘ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ಸೀಮಿತವಾಗಿ, ನಿಮ್ಮ ಗಮನಕ್ಕೆ ಬರುವ ರಸ್ತೆ, ತೋಡು, ಒಳಚರಂಡಿ ಇತ್ಯಾದಿ ಯಾವುದೇ ಸಮಸ್ಯೆ ಇದ್ದರೂ ಅದರ ಬಗ್ಗೆ ಮೂರು ನಿಮಿಷಗಳ ವಿಡಿಯೊ ಮಾಡಿ, ನಿಮ್ಮ ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂನಲ್ಲಿ ಹಾಕಬೇಕು. ಯಾರ ಪೋಸ್ಟ್‌ಗೆ ಹೆಚ್ಚು ಲೈಕ್ ಬಂದಿದೆಯೋ ಅವರಿಗೆ ಈ ಎರಡು ಪ್ರಶಸ್ತಿ ನೀಡಲಾಗುವುದು’ ಬಂಧುತ್ವ ವೇದಿಕೆ ಕಳೆದ ತಿಂಗಳು ಪ್ರಕಟಣೆ ನೀಡಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ADVERTISEMENT

ಎಂ.ಜಿ.ಹೆಗಡೆ ಮಾತನಾಡಿ, ‘ರಸ್ತೆಗಳಲ್ಲಿಲ ಚಿಕ್ಕ ಹೊಂಡ ಕಂಡಾಕ್ಷಣವೇ ದುರಸ್ತಿ ಮಾಡಬೇಕು. ಮಹಾನಗರಪಾಲಿಕೆಯಲ್ಲಿ ಇದಕ್ಕಾಗಿ ತಂಡವೊಂದನ್ನು ರಚಿಸಬೇಕು. ಈ ತಂಡ ಇಂತಹ ಸಮಸ್ಯೆಯತ್ತ ಗಮನಕೊಡಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಬಿದ್ದಾಗ ಸರಿ ಮಾಡಲು ತಂಡವಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೆಲಸವಾಗುತ್ತಿಲ್ಲ. ಇವರಿಗೆ ಸ್ಥಳೀಯ ಶಾಸಕರು ಜನಪ್ರತಿನಿಧಿಗಳು ಚುರುಕು ಮುಟ್ಟಿಸಬೇಕು. ಇದೇ ರೀತಿ ಸಮಸ್ಯೆ ಮುಂದುವರಿದರೆ ಜನರ ವಿರೋಧ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಸುನಿಲ್ ಬಜಿಲಕೇರಿ ಮಾತನಾಡಿ, ‘ಈ ಸ್ಪರ್ಧೆ ಮತ್ತು ಬಹುಮಾನ ನೀಡಿದ್ದು ಖುಷಿಯ ಕಾರ್ಯಕ್ರಮ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.